ಮಂಗಳೂರು: ಕರ್ನಾಟಕ ಬ್ಯಾಂಕ್ ನಲ್ಲಿ ಇದೀಗ ಸಿಇಒ ಮತ್ತು ನಿರ್ದೇಶಕರುಗಳ ರಾಜೀನಾಮೆ ಬಳಿಕ ಬ್ಯಾಂಕ್ ನಲ್ಲಿ ಖಾತೆ ಇರುವವರಿಗೆ ಹೊಸ ಆತಂಕ ಶುರುವಾಗಿದೆ. ಬ್ಯಾಂಕ್ ನಲ್ಲಿ ಹಣ ಇಡೋದು ಸುರಕ್ಷಿತವಾ ಎಂಬ ಆತಂಕ ಎದುರಾಗಿದೆ.
ಕರ್ನಾಟಕ ಬ್ಯಾಂಕ್ ನಲ್ಲಿ ಇತ್ತೀಚೆಗೆ ನಡೆದ ಕೆಲವು ಗೊಂದಲಗಳಿಂದಾಗಿ ಸಿಇಒ ಶ್ರೀಕೃಷ್ಣನ್ ಹರಿ ಹರ ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಗೊಂದಲಗಳಿಂದಾಗಿಯೇ ಇಬ್ಬರೂ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
1.53 ಕೋಟಿ ರೂ. ವೆಚ್ಚದ ವಿವಾದದ ಕಾರಣಕ್ಕೆ ಈಗ ದೊಡ್ಡ ಹುದ್ದೆಯಲ್ಲಿದ್ದ ಇಬ್ಬರ ತಲೆದಂಡವಾಗಿದೆ. ಇದಾದ ಬಳಿಕ ಶ್ರೀಕೃಷ್ಣನ್ ಶರ್ಮ ಮತ್ತು ಬ್ಯಾಂಕ್ ಆಡಳಿತ ಮಂಡಳಿ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೆ ಈ ರೀತಿ ಅಂತ್ಯ ಸಿಕ್ಕಿದೆ ಎನ್ನಲಾಗುತ್ತಿದೆ.
ಇದೆಲ್ಲದರ ನಡುವೆ ಗ್ರಾಹಕರಲ್ಲಿ ಸಣ್ಣ ಆತಂಕ ಮೂಡಿದೆ. ಕರ್ನಾಟಕ ಬ್ಯಾಂಕ್ ರಾಜ್ಯದ ಬಹುದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಇದರಲ್ಲಿ ಅನೇಕರು ತಮ್ಮ ಉಳಿತಾಯದ ಹಣ ಠೇವಣಿ ಇಟ್ಟಿದ್ದಾರೆ. ಇದೀಗ ತಮ್ಮ ಹಣಕ್ಕೆ ಕುತ್ತು ಬರಬಹುದೇ ಎಂಬ ಆತಂಕ ಶುರುವಾಗಿದೆ. ಆದರೆ ಸದ್ಯಕ್ಕೆ ಬ್ಯಾಂಕ್ ನ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದ್ದು, ಗ್ರಾಹಕರು ಆತಂಕಪಡಬೇಕಾಗಿಲ್ಲ ಎಂದು ಬ್ಯಾಂಕ್ ಮೂಲಗಳು ಹೇಳಿವೆ. ಜುಲೈ 2 ರಂದು ಹೊಸ ಸಿಇಒ ನೇಮಕವೂ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದೆ.