ಶತಕದ ಸಂಭ್ರಮದಲ್ಲಿರುವ ಮೆಲೊಡಿ ಕಿಂಗ್ ಅರ್ಜುನ್ ಜನ್ಯಾಗೆ ಕಿಚ್ಚ ಸುದೀಪ್ ರಿಂದ ಬಂತು ಸರ್ಪ್ರೈಸ್ ಸಂದೇಶ

ಬುಧವಾರ, 12 ಡಿಸೆಂಬರ್ 2018 (09:52 IST)
ಬೆಂಗಳೂರು: ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ಮೆಲೊಡಿ ಹಾಡುಗಳ ಕಾರುಬಾರು ನಡೆಯುತ್ತಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಅವರೀಗ 100 ನೇ ಸಿನಿಮಾಗೆ ಸಂಗೀತ ನೀಡುವ ಸಂಭ್ರಮದಲ್ಲಿದ್ದಾರೆ.


ಅರ್ಜುನ್ ಇಷ್ಟು ಬೇಗ ಶತಕ ಮಾಡಿಬಿಟ್ಟರಾ ಎಂದು ಅಚ್ಚರಿಯಾಗಬಹುದು. ಅವರ ಸಂಗೀತ ನಿರ್ದೇಶನದ ಚಿತ್ರಗಳು ಇದೀಗ ತಿಂಗಳಿಗೆ ಮೂರು-ನಾಲ್ಕು ಬಿಡುಗಡೆಯಾಗುತ್ತಲೇ ಇವೆ. ಅಚ್ಚರಿಯೆಂದರೆ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗುತ್ತಿವೆ.

ಮೊದಲ ಸಿನಿಮಾ ಅಟೋಗ್ರಾಫ್ ಪ್ಲೀಸ್ ಆದರೂ ಅವರಿಗೆ ಆರಂಭದಲ್ಲಿ ಹೆಸರು ಬಂದಿರಲಿಲ್ಲ. ಆದರೆ ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ನಂತರ ಅರ್ಜುನ್ ಅದೃಷ್ಟ ಖುಲಾಯಿಸಿತು. ಈ ಸಿನಿಮಾ ಸಂದರ್ಭದಲ್ಲಿ ಸ್ವತಃ ಸುದೀಪ್ ಅರ್ಜುನ್ ಹೆಸರಿನ ಜತೆಗೆ ಜನ್ಯ ಎಂದು ಸೇರ್ಪಡೆಮಾಡಿದ್ದರು.

ಇದಾದ ಬಳಿಕ ಸತತವಾಗಿ ಮೆಲೊಡಿ ಹಾಡುಗಳನ್ನು ಕೊಟ್ಟ ಅರ್ಜುನ್ ಕನ್ನಡದ ಎಆರ್ ರೆಹಮಾನ್ ಎಂದರೂ ತಪ್ಪಾಗಲಾರದು. ಅವರೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಎಂಬ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದು ಅದು ಅವರ 100 ನೇ ಚಿತ್ರವಾಗಲಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಜನ್ಯಾಗೆ ಶುಭ ಹಾರೈಸಿ ಸಂದೇಶವೊಂದನ್ನು ಬರೆದಿದ್ದಾರೆ. ನಿನ್ನ ಸುಂದರ ಯಶಸ್ಸಿನ ಪಯಣದ ಪ್ರತಿ ಹೆಜ್ಜೆಗೂ ನೀನು ಹಕ್ಕುದಾರ. ನಿನ್ನನ್ನು ಒಬ್ಬ ಸಂಗೀತ ನಿರ್ದೇಶಕ ಮಾತ್ರವಲ್ಲ, ಒಬ್ಬ ಒಳ್ಳೆಯ ಮನುಷ್ಯನಾಗಿ ಪ್ರತೀ ಹಂತದಲ್ಲೂ ನೋಡಿದ ಸಂತೋಷ ನನ್ನದು. ಇದೇ ರೀತಿ ನಮ್ಮನ್ನು ಮನರಂಜಿಸುತ್ತಲೇ ಇರು ಎಂದು ಸುದೀಪ್ ಅಭಿನಂದಿಸಿದ್ದಾರೆ.

ಇವರ ಸಂಗೀತ ನಿರ್ದೇಶನದಲ್ಲಿ ಮತ್ತಷ್ಟು ಮೆಲೊಡಿ ಹಾಡುಗಳು ನಮ್ಮ ಕಿವಿಗೆ ತಂಪೆರೆಯುವಂತಾಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ