ಬೆಂಗಳೂರು: ಈಚೆಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧ ಬಿಗ್ಬಾಸ್ ಮನೆಗೆ ಬೀಗ ಹಾಕಿದ ಪ್ರಕರಣದ ಬೆನ್ನಲ್ಲೇ, ಇದೀಗ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.
ಸ್ಪರ್ಧಿ ರಕ್ಷಿತಾ ಶೆಟ್ಟಿ ಮೇಲೆ ಕೋಪಗೊಂಡ ಬಳಿಕ ಜಾಹ್ನವಿ ಜತೆ ಅಶ್ವಿನಿ ಅವರು ಮಾತನಾಡುವಾಗ S ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆ ಮೆಟ್ಟಿಲೇರಿದ್ದಾರೆ.
ದೂರಿನಲ್ಲಿ ಸಹ ಸ್ಪರ್ಧಿ ರಕ್ಷಿತಾ ಕುರಿತು ಈ ಮಾತನ್ನು ಆಡಿರುವುದರಿಂದ ವ್ಯಕ್ತಿತ್ವ ನಿಂದನೆಯಾಗಿದೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದರು. ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ?
ಬಿಗ್ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ರಕ್ಷಿತ ರವರಿಗೆ She is S, ಆ Category ನ ಎಂದು ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ.
ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಅಶ್ವಿನಿ ಗೌಡ ಹೇಳಿದ ಮಾತನ್ನು ತೆಗೆಯದೇ ತಮ್ಮ ಟಿಆರ್ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.