ಬೆಂಗಳೂರು: ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ದೋಣಿ ಮಗುಚಿದ ಘಟನೆ ಸಂಬಂಧ ಇದೀಗ ಕಾಂತಾರ ಸಿನಿಮಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.
ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ 1ಗೆ ಒಂದಾದ್ಮೇಲೆ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಕಾಂತಾರ ಚಾಪ್ಟರ್-1 ಸಿನಿಮಾ ತಂಡ ಕೊನೆ ಹಂತದ ಚಿತ್ರೀಕರಣ ಮಾಡುವ ವೇಳೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗ್ತಿವೆ.
ಸಿನಿಮಾದ ಮೂವರು ಸಹ ಕಲಾವಿದರು ಸಾವಿನ ನೋವು ಮಾಸುವ ಮುನ್ನವೇ ಮತ್ತೊಂದು ಆಘಾತ ಎದುರಾಗಿದೆ. ಕೂದಲೆಳೆ ಅಂತರದಲ್ಲೇ ಭಾರೀ ಅನಾಹುತವೊಂದು ತಪ್ಪಿದೆ. ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಮೂವತ್ತು ಜನರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಜೂನ್ 14 ರಂದು ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ದೋಣಿ ಮಗುಚಿದ ಘಟನೆ ಸಂಭವಿಸಿದೆ ಎಂದು ವರದಿ ಆಗಿತ್ತು. ವರದಿಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಮಾಧ್ಯಮಗಳ ಜೊತೆಯೂ ಸೋಮವಾರ ಮಾತನಾಡಿದ್ದರು.
ಮಾಣಿ ಜಲಾಶಯದಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಹೊಸನಗರ ತಹಶೀಲ್ದಾರ್ ಕಚೇರಿಯಿಂದ ಪತ್ರ ಬರೆದಿದ್ದು, ಪತ್ರ ತಲುಪಿದ ಮೂರುದಿನಗಳ ಒಳಗಾಗಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ಇಲ್ಲವಾದಲ್ಲಿ ನಂತರ ಶೂಟಿಂಗ್ಗೆ ನೀಡಿರುವ ಅನುಮತಿಯನ್ನ ರದ್ದುಗೊಳಿಸಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ತಹಶೀಲ್ದಾರ್ ಕಛೇರಿಯಿಂದ ಕಾಂತಾರ ಚಿತ್ರತಂಡಕ್ಕೆ ಖಡಕ್ ಪತ್ರವೊಂದು ರವಾನಿಸಿದೆ.