ಬೆಂಗಳೂರು: ಅಭಿಮಾನಿಗಳಿಂದ ಡಿ ಬಾಸ್, ಚಕ್ರವರ್ತಿ ಎಂದೆಲ್ಲಾ ಕರೆಯಿಸಿಕೊಳ್ಳುತ್ತಿದ್ದ ನಟ ದರ್ಶನ್ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುವಂತೆ ಮಾಡಲು ಪ್ರಮುಖವಾಗಿ ಈ ಮೂವರೇ ಕಾರಣ.
ಮೊದಲನೆಯವರು ಎಸಿಪಿ ಚಂದನ್ ಕುಮಾರ್. ನಟ ದರ್ಶನ್ ಸಹಚರರು ರೇಣುಕಾಸ್ವಾಮಿ ಮೃತದೇಹ ಪೊಲೀಸರಿಗೆ ಸಿಕ್ಕಾಗ ತಾವೇ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ ಕೊಲೆ ಮಾಡಿದ್ದು ಎಂದು ಶರಣಾಗಲು ಬಂದಿದ್ದರು. ಆಗ ಎಸಿಪಿ ಚಂದನ್ ಗೆ ಅನುಮಾನವಾಗಿ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ನಡೆದ ಘಟನೆ ಬಯಲಿಗೆ ಬಂದಿತ್ತು. ಬಹುಶಃ ಅಂದು ಅವರು ಇದು ಸಾಮಾನ್ಯ ಪ್ರಕರಣ ಎಂದು ಬಿಟ್ಟಿದ್ದರೆ ದರ್ಶನ್ ಹೆಸರು ಹೊರಗೇ ಬರುತ್ತಿರಲಿಲ್ಲ. ಆದರೆ ಬಳಿಕ ಅವರು ಪ್ರಕರಣದ ಪ್ರತಿಯೊಂದು ಆಯಾಮಗಳಲ್ಲೂ ತನಿಖೆ ನಡೆಸಿ ಖಡಕ್ ಆಗಿ ಆರೋಪಪಟ್ಟಿ ಸಲ್ಲಿಸಿದ್ದರು. ಇದು ದರ್ಶನ್ ಗೆ ಮುಳುವಾಯಿತು.
ಎರಡನೆಯವರು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್. ಹೈಕೋರ್ಟ್ ಮತ್ತು ಕೆಳ ಹಂತದ ಕೋರ್ಟ್ ನಲ್ಲಿ ದರ್ಶನ್ ಆಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಪ್ರಬಲ ವಾದ ಮಂಡಿಸಿ ಆರು ತಿಂಗಳು ಬೇಲ್ ಸಿಗದೇ ಒದ್ದಾಡುವಂತೆ ಮಾಡಿದ್ದರು. ಇವರೇ ಸುಪ್ರೀಂಕೋರ್ಟ್ ವಕೀಲರಿಗೂ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು.
ಮೂರನೆಯವರೆಂದರೆ ಸುಪ್ರೀಂಕೋರ್ಟ್ ವಕೀಲ ಸಿದ್ಧಾರ್ಥ್ ಲೂತ್ರಾ ಅವರದ್ದು. ಬಹುಶಃ ದರ್ಶನ್ ಮತ್ತೆ ಜೈಲು ಸೇರಲು ಇವರೇ ಕಾರಣ ಎಂದರೂ ತಪ್ಪಲ್ಲ. ದರ್ಶನ್ ಆಂಡ್ ಗ್ಯಾಂಗ್ ನಡೆಸಿದ ಕುಕೃತ್ಯಗಳನ್ನು ಕೋರ್ಟ್ ಮುಂದೆ ಸಮರ್ಥವಾಗಿ ಮಂಡಿಸಿದ್ದು ಸಿದ್ಧಾರ್ಥ್ ಲೂತ್ರಾ. ಸುಪ್ರೀಂಕೋರ್ಟ್ ನಲ್ಲಿ ಹಲವು ವರ್ಷದ ಅನುಭವ ಹೊಂದಿರುವ ಅವರು ದರ್ಶನ್ ಕೇಸ್ ನ್ನು ಸಮರ್ಥವಾಗಿ ನಿಭಾಯಿಸಿದ್ದರು. ಈ ಮೂವರ ಶ್ರಮದಿಂದಲೇ ದರ್ಶನ್ ಆಂಡ್ ಗ್ಯಾಂಗ್ ಈಗ ಜೈಲು ಸೇರಿದೆ.