ಸಿನಿಮೀಯ ಸ್ಟೈಲ್‌ನಲ್ಲಿ ಕೊಲೆಗೆ ಸ್ನೇಹಿತನಿಂದಲೇ ಸ್ಕೆಚ್!

ಸೋಮವಾರ, 14 ಆಗಸ್ಟ್ 2023 (10:51 IST)
ಮಂಡ್ಯ : ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜೆಡಿಎಸ್ ಮುಖಂಡನೊಬ್ಬನ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮದ್ದೂರಿನ ಜೆಡಿಎಸ್ ಮುಖಂಡ ಹಾಗೂ ಮಾಜಿ ರೌಡಿಶೀಟರ್ ಅಪ್ಪುಗೌಡ ಹಲ್ಲೆಗೊಳಗಾದವ. ಅಪ್ಪುಗೌಡ ಪ್ರತಿನಿತ್ಯ ತಮ್ಮ ಮನೆಯನ್ನು ಬಿಟ್ಟರೆ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬಂದು ಕರ್ಪೂರ ಹಚ್ಚಿ ಕೈ ಮುಗಿದು ಬೇರೆ ಕೆಲಸಕ್ಕೆ ಹೋಗ್ತಾ ಇದ್ದ.

ಅದೇ ರೀತಿ ಇಂದು ಅಪ್ಪುಗೌಡ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುವ ವೇಳೆ ಆರು ಮಂದಿಯ ಗುಂಪು ಈತನ ಮೇಲೆ ಅಟ್ಯಾಕ್ ಮಾಡಿದೆ. ಮೂವರು ನೇರವಾಗಿ ಅಪ್ಪುಗೌಡನ ಮೇಲೆ ದಾಳಿ ನಡೆಸಲು ಮುಂದಾದರೆ, ಇನ್ನೂ ಮೂವರು ಅಪ್ಪುಗೌಡ ಎಸ್ಕೇಪ್ ಆಗದ ರೀತಿ ನೋಡಿಕೊಳ್ಳುತ್ತಾ ಇರುತ್ತಾರೆ. 

ಅಪ್ಪುಗೌಡನ ಬಳಿ ಈ ಹಂತಕರು ಚಾಕು ಹಿಡಿದು ಬರುತ್ತಿದ್ದ ಹಾಗೆ ಅಲ್ಲಿಯೇ ಇದ್ದ ಇತರ ಭಕ್ತರು ಹಾಗೂ ಅರ್ಚಕರು ಕಿರುಚಿಕೊಳ್ಳುತ್ತಾರೆ. ಬಳಿಕ ಅಲರ್ಟ್ ಆದ ಅಪ್ಪುಗೌಡ ಹಂತಕರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಾನೆ. ಆದರೆ ಇಬ್ಬರು ಹಂತಕರು ತಮ್ಮ ಕೈಯಲ್ಲಿ ಇದ್ದ ಮಾರಾಕಾಸ್ತ್ರದಿಂದ ಅಪ್ಪುಗೌಡನ ಭುಜ ಹಾಗೂ ಬೆನ್ನಿನ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳೀಯರು ಮುಂದೆ ಬಾರದಂತೆ ಹಂತಕರು ಲಾಂಗ್ ಹಿಡಿದು ಜನರನ್ನು ಎದುರಿಸಿದ್ದಾರೆ.

ಈ ವೇಳೆ ದೇವಸ್ಥಾನಕ್ಕೆ ಆಂಜನೇಯಸ್ವಾಮಿ ದರ್ಶನಕ್ಕೆ ಎಂದು ಮಫ್ತಿಯಲ್ಲಿ ಬಂದ ಪೊಲೀಸ್ ಪೇದೆ ಕುಮಾರಸ್ವಾಮಿ ಹಂತಕರ ಕಡೆಗೆ ಹೂವಿನ ಗಿಡದ ಫಾಟ್ ಎಸೆದು ಅಪ್ಪುಗೌಡನನ್ನು ರಕ್ಷಣೆ ಮಾಡುತ್ತಾರೆ. ಇದಾದ ನಂತರ ಸ್ಥಳೀಯರು ಎಲ್ಲರೂ ಹಂತಕರ ಕಡೆಗೆ ಸುತ್ತುವರೆಯಲು ಮುಂದಾಗುತ್ತಿದ್ದಂತೆ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ