ಅಪ್ಪ ಅನಂತ್ ಕುಮಾರ್ ಸುದ್ದಿಗೆ ಬಂದಿದ್ದಕ್ಕೆ ಪ್ರಿಯಾಂಕ್ ಖರ್ಗೆಗೆ ಬೆಂಡೆತ್ತಿದ ಪುತ್ರಿ ಐಶ್ವರ್ಯಾ

Krishnaveni K

ಬುಧವಾರ, 22 ಅಕ್ಟೋಬರ್ 2025 (12:05 IST)
Photo Credit: X
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಹೈಕಮಾಂಡ್ ಗೆ ಕಪ್ಪ ನೀಡುವ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ದಿವಂಗತ ಅನಂತಕುಮಾರ್ ಹೆಸರು ಎಳೆದು ತಂದಿದ್ದಕ್ಕೆ ಅವರ ಪುತ್ರಿ ಐಶ್ವರ್ಯಾ ಟ್ವೀಟ್ ಮೂಲಕವೇ ಬೆಂಡೆತ್ತಿದ್ದಾರೆ.

ಅನಂತಕುಮಾರ್ ಬಿಜೆಪಿಯ ಪ್ರಮುಖ ನಾಯಕರಾಗಿದ್ದವರು. ಕೇಂದ್ರ ಸಚಿವರೂ ಆಗಿದ್ದವರು. ಆದರೆ ಅವರು ಕಾಲವಾಗಿ ಈಗ ವರ್ಷಗಳೇ ಕಳೆದಿದೆ. ಆದರೆ ಈಗ ಅವರು ಮತ್ತು ಯಡಿಯೂರಪ್ಪ ನಡುವೆ ಹಣಕಾಸಿನ  ವಿಚಾರವಾಗಿ ನಡೆದ ವಿಡಿಯೋ ತುಣುಕೊಂದನ್ನು ಹರಿಯಬಿಟ್ಟಿರುವ ಪ್ರಿಯಾಂಕ್ ಖರ್ಗೆ ಹೈಕಮಾಂಡ್ ಗೆ ಕಪ್ಪ ನೀಡುವ ಸಂಸ್ಕೃತಿ ಬಿಜೆಪಿಯದ್ದು ಕಾಂಗ್ರೆಸ್ ನದ್ದಲ್ಲ ಎಂದಿದ್ದರು.

ಅವರ ಟ್ವೀಟ್ ಗೆ ಅನಂತಕುಮಾರ್ ಪುತ್ರಿ ಐಶ್ವರ್ಯಾ ಸಿಟ್ಟಿಗೆದ್ದಿದ್ದಾರೆ. ‘ಪ್ರಿಯಾಂಕ್ ಖರ್ಗೆಯವರೇ ನೀವು ಅತ್ಯಂತ ಕೀಳುಮಟ್ಟಿಕ್ಕಿಳಿದಿದ್ದೀರಿ. ಆರ್ ಎಸ್ಎಸ್ ಬಳಿಕ ನೀವು ನಿಮ್ಮದೇ ಪಕ್ಷದ ನಾಯಕರೂ ಮೆಚ್ಚುವಂತೆ ಕರ್ನಾಟಕಕ್ಕಾಗಿಯೇ ಕೆಲಸ ಮಾಡುತ್ತಿದ್ದ ಅನಂತಕುಮಾರ್ ಬಗ್ಗೆ ಇಂತಹ ಕೀಳುಮಟ್ಟದ ಮಾತನಾಡುತ್ತಿದ್ದೀರಿ. ನಿಮಗೆ ಮರೆತು ಹೋಗಿದೆ ಎಂದರೆ ಈವತ್ತು ಮತ್ತೊಮ್ಮೆ ನೆನಪಿಸುತ್ತಿದ್ದೇನೆ, ಈ ವಿಡಿಯೋದಲ್ಲಿ ಹೇಳಿರುವ ಸಂಭಾಷಣೆ ನಿಮ್ಮದೇ ಪಕ್ಷದ ಹೈಕಮಾಂಡ್ ಗೆ ನಿಮ್ಮವರು ನೀಡಿದ ಕಪ್ಪದ ಬಗ್ಗೆ ಡೈರಿಯಲ್ಲಿ ಬರೆದ ವಿಚಾರದ ಬಗ್ಗೆ ಇಬ್ಬರೂ ನಾಯಕರು ಮಾತನಾಡುತ್ತಿದ್ದಾರೆ.  ಸತ್ಯ ಹೊರಬರಲೇಬೇಕು. ನಿಮ್ಮ ಈ ಟ್ವೀಟ್ ನಿಮ್ಮದೇ ನಾಯಕರಿಗೆ ಮುಳುವಾಗಲಿದೆ ನೋಡುತ್ತಿರಿ’ ಎಂದು ಐಶ್ವರ್ಯಾ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ