ಕಂಠೀರವ ಸ್ಟುಡಿಯೋ ತಲುಪಿದ ಅಂಬರೀಶ್ ಪಾರ್ಥಿವ ಶರೀರ: ಕುಸಿದು ಬಿದ್ದ ಸುಮಲತಾ ಅಂಬರೀಶ್

ಸೋಮವಾರ, 26 ನವೆಂಬರ್ 2018 (16:03 IST)
ಬೆಂಗಳೂರು: ಮೊನ್ನೆಯಷ್ಟೇ ನಿಧನರಾದ ಹಿರಿಯ ನಟ ಅಂಬರೀಶ್ ಪಾರ್ಥಿವ ಶರೀರ ಕಂಠೀರವ ಸ್ಟುಡಿಯೋ ತಲುಪಿದ್ದು, ಚಿತಾಗಾರದ ಬಳಿ ಬರುತ್ತಿದ್ದಂತೆ ಪತ್ನಿ ಸುಮಲತಾ ಅಂಬರೀಶ್ ಕುಸಿದು ಬಿದ್ದಿದ್ದಾರೆ.


ಮೊನ್ನೆಯಿಂದ ಪತಿಯ ಬಳಿಯೇ ಇದ್ದ ಸುಮಲತಾ ತೀವ್ರ ಬಳಲಿಕೆಯಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ಮಾಡಲಾಯಿತು.  ತಕ್ಷಣ ಅಲ್ಲಿಯೇ ಅವರನ್ನು ಕೂರಿಸಿ ಆರೈಕೆ ಮಾಡಲಾಯಿತು.

ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಲಿದೆ. ಈ ಸಂದರ್ಭದಲ್ಲಿ ಕನ್ನಡ, ತೆಲುಗು ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಮಂದಿ ಕಂಠೀರವ ಸ್ಟುಡಿಯೋ ಬಳಿ ಸೇರಿದ್ದು, ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಪಾರ್ಥಿವ ಶರೀರ ತಲುಪುವ ಮೊದಲೇ ಚಿತಾಗಾರದ ಬಳಿ ಬಂದು ಸೇರಿದ ನಟ ಯಶ್, ಸರೋಜಾದೇವಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖ ಗಣ್ಯರು ಕರ್ಪೂರವಿಟ್ಟು ಚಿತೆಗೆ ಪೂಜೆ ಸಲ್ಲಿಸಿದರು.

ಕನ್ನಡ ಚಿತ್ರರಂಗದಿಂದ ನಟರಾದ ಶಿವರಾಜ್ ಕುಮಾರ್, ಯಶ್, ಪುನೀತ್ ರಾಜ್ ಕುಮಾರ್, ದರ್ಶನ್, ಉಪೇಂದ್ರ, ರವಿಚಂದ್ರನ್, ಜಯಮಾಲ, ಶ್ರೀನಾಥ್, ಅಭಿಜಿತ್, ಅರ್ಜುನ್ ಸರ್ಜಾ, ರಾಕ್ ಲೈನ್ ವೆಂಕಟೇಶ್, ಧ್ರುವ ಸರ್ಜಾ, ತೆಲುಗು ರೆಬಲ್ ಸ್ಟಾರ್ ಮೋಹನ್ ಬಾಬು ಸೇರಿದಂತೆ ಬಹುತೇಕ ಚಿತ್ರರಂಗದ ಸದಸ್ಯರು ಉಪಸ್ಥಿತರಿದ್ದಾರೆ. ಇನ್ನೊಂದೆಡೆ ರಾಜಕೀಯ ಕ್ಷೇತ್ರದಿಂದ ಸ್ವತಃ ಸಿಎಂ ಕುಮಾರಸ್ವಾಮಿ, ಎಚ್ ಡಿ ದೇವೇಗೌಡ, ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಎಚ್ ಡಿ ರೇವಣ್ಣ, ಬಿಎಸ್ ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ನಾಯಕರೇ ಇಲ್ಲಿ ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ