ಮಠದಾಗೆ ಕೂತು ಈ ಸ್ವಾಮೀಜಿಗಳಿಗೆ ಮಾಡಕ್ಕೆ ಬೇರೆ ಕೆಲಸ ಇಲ್ವಾ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

Krishnaveni K

ಸೋಮವಾರ, 1 ಜುಲೈ 2024 (14:38 IST)
Photo Credit: Facebook
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಾಗಿ ಚರ್ಚೆಗೆ ಕಾರಣರಾಗಿರುವ ಸ್ವಾಮೀಜಿಗಳ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ. ಈ ಸ್ವಾಮೀಜಿಗಳಿಗೆ ಮಾಡಕ್ಕೆ ಬೇರೆ ಕೆಲಸ ಇಲ್ವಾ ಎಂದು ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಹೋಲಿಸಿದ ವಚನಾನಂದ ಶ್ರೀಗಳಿಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನು ಕ್ರಿಕೆಟ್ ಪ್ಲೇಯರ್ ಗಳಿಗೆ ಹೋಲಿಸ್ತಾರೆ. ಇವರಿಗೆ ಮಠದಾಗೆ ಕೂತು ಮಾಡಕ್ಕೆ ಬೇರೆ ಕೆಲಸ ಇಲ್ವಾ ಎಂದು ಕಿಡಿ ಕಾರಿದ್ದಾರೆ.

‘ಧರ್ಮದ ಕೆಲಸ ಮಾಡುವುದು ಬಿಟ್ಟು ಇಂತಹದ್ದೆಲ್ಲಾ ಮಾಡಕ್ಕೆ ಬೇರೆ ಕೆಲಸ ಇಲ್ವಾ ಇವರಿಗೆ. ಈವತ್ತು ಮತಾಂತರವಾಗುತ್ತಿದೆ, ಲವ್ ಜಿಹಾದ್ ಆಗ್ತಾ ಇದೆ. ಹಿಂದೂ ಹೆಣ್ಣು ಮಕ್ಕಳನ್ನು ಓಡಿಸಿಕೊಂಡು ಹೋಗ್ತಿದ್ದಾರೆ. ಆದರೆ ಈ ಸ್ವಾಮೀಜಿಗಳು ಏನು ಮಾಡ್ತಿದ್ದಾರೆ? ಇದರ ಬಗ್ಗೆ ಹೋರಾಡಲಿ. ಎಷ್ಟು ಸ್ವಾಮೀಜಿಗಳು ಇಂತಹ ವಿಚಾರಗಳ ಬಗ್ಗೆ ಮಾತನಾಡುತ್ತಾರೆ? ಈ ಕೆಲಸಾನೇ ಬಿಟ್ಟಿದ್ದಾರೆ ಇವರೆಲ್ಲಾ. ಬರೀ ಅವನನ್ನು ಮುಖ್ಯಮಂತ್ರಿ ಮಾಡಿ, ಇವರನ್ನು ಎಂಎಲ್ಎ ಮಾಡಿ ಅನ್ನೋದೇ ಕೆಲಸ. ಈ ಹಿಂದೆ ಹರಿಹರ ಸ್ವಾಮೀಜಿ ಹೇಳಿದ್ರಲ್ಲಾ, ನೀರಾಣಿಯವರನ್ನು ಸಚಿವರಾಗಿ ಮಾಡಲೇಬೇಕು. ಇಲ್ಲಾಂದ್ರೆ ಇಡೀ ಪಂಚಮಸಾಲಿ ಜನಾಂಗವೇ ವಿರೋಧ ಅಂತ. ಇವರ ಕೆಲಸವಾ ಇದು’ ಎಂದು ಯತ್ನಾಳ್ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಚಂದ್ರಶೇಖರ ಸ್ವಾಮೀಜಿ ಡಿಕೆ ಶಿವಕುಮಾರ್ ಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲಿ ಎಂದಿದ್ದು ರಾಜಕೀಯದಲ್ಲಿ ಕೋಲಾಹಲವೆದ್ದಿತ್ತು. ಬಳಿಕ ಹಲವು ಸ್ವಾಮೀಜಿಗಳು ಈ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಕೆಲವರು ಡಿಕೆ ಶಿವಕುಮಾರ್ ಪರವಾಗಿದ್ದರೆ ಮತ್ತೆ ಕೆಲವರು ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ. ಧರ್ಮದ ಕಾರ್ಯ ಮರೆತು ರಾಜಕೀಯದಲ್ಲಿ ಮೂಗು ತೂರಿಸುತ್ತಿರುವ ಸ್ವಾಮೀಜಿಗಳ ಬಗ್ಗೆ ಈಗ ಯತ್ನಾಳ್ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ