ಹೈಕಮಾಂಡ್ ನೋಟಿಸ್ ಗೆ ಉತ್ತರಿಸದೇ ಸಮಯ ಕೇಳಿದ ಬಸನಗೌಡ ಪಾಟೀಲ್ ಯತ್ನಾಳ್ ಲೆಕ್ಕಾಚಾರವೇನು
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದು ತಮ್ಮದೇ ಕೆಲವು ಬೆಂಬಲಿಗ ಶಾಸಕರ ಗುಂಪು ಕಟ್ಟಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಾ ಪಕ್ಷಕ್ಕೆ ಮುಜುಗರವುಂಟು ಮಾಡುತ್ತಿದ್ದಾರೆ.
ಇದೇ ಕಾರಣಕ್ಕೆ ಹೈಕಮಾಂಡ್ ಎರಡನೇ ಬಾರಿಗೆ ಯತ್ನಾಳ್ ಗೆ ಶಿಸ್ತು ಸಮಿತಿ ನೋಟಿಸ್ ಕೊಟ್ಟಿತ್ತು. ಆದರೆ ಇದುವರೆಗೆ ಅವರು ನೋಟಿಸ್ ಗೆ ಉತ್ತರ ಕೊಟ್ಟಿರಲಿಲ್ಲ. ಹೀಗಾಗಿ ಹೈಕಮಾಂಡ್ ತಾನಾಗಿಯೇ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಇದರ ನಡುವೆ ಅವರು ಕೊನೆಯ ಕ್ಷಣದಲ್ಲಿ ಸಮಯಾವಕಾಶ ಕೇಳಿದ್ದಾರೆ ಎಂದು ವರದಿಯಾಗಿದೆ.
ಇದೀಗ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಜೊತೆ ಯತ್ನಾಳ್ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮಾತುಕತೆಯ ಪರಿಣಾಮ ನೋಡಿಕೊಂಡು ಅವರು ಮುಂದಿನ ಹೆಜ್ಜೆಯಿಡಬಹುದು.