ಇವರ ಕುರ್ಚಿ ಕಾಳಗದಲ್ಲಿ ಕರ್ನಾಟಕದ ಉದ್ಯೋಗ ಆಂಧ್ರ ಪಾಲಾಗಿದೆ: ಛಲವಾದಿ ನಾರಾಯಣಸ್ವಾಮಿ

Krishnaveni K

ಬುಧವಾರ, 15 ಅಕ್ಟೋಬರ್ 2025 (17:32 IST)
ಬೆಂಗಳೂರು: ಇವರ ಕುರ್ಚಿ ಕಾಳಗದಿಂದಾಗಿ ಕರ್ನಾಟಕಕ್ಕೆ ಸಿಗಬೇಕಾಗಿದ್ದ ಉದ್ಯೋಗ ಆಂಧ್ರಪ್ರದೇಶದ ಪಾಲಾಗಿದೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೂಗಲ್ ಎಐ ಹಬ್ ಆಂಧ್ರಪ್ರದೇಶದ ಪಾಲಾದ ಹಿನ್ನಲೆಯಲ್ಲಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ' ಕುರ್ಚಿ ಕಾಳಗದಲ್ಲಿ ಕರ್ನಾಟಕ ಹಿತ ಹಾಳು! ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ಥಾನ ಕಾಪಾಡಿಕೊಳ್ಳಲು ಓಡಾಟದಲ್ಲಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಅದೇ ಸ್ಥಾನ ಕಿತ್ತುಕೊಳ್ಳಲು ಪಣತೊಟ್ಟಿದ್ದಾರೆ. ಇವರಿಬ್ಬರ ಅಧಿಕಾರ ಕಾಳಗದಲ್ಲಿ ರಾಜ್ಯದ ಹಿತ ಹಾಳಾಗಿದೆ.

ಉದ್ಯಮ ಹೂಡಿಕೆಗಾಗಿ ಕಾದಿದ್ದ ಕರ್ನಾಟಕಕ್ಕೆ ತಕ್ಕ ಅವಕಾಶ ಕೈತಪ್ಪಿ ನೆರೆಯ ಆಂಧ್ರದತ್ತ ಸರಿದಿದೆ. ಇದು ಕಾಂಗ್ರೆಸ್ ಸರ್ಕಾರದ ಅಸಮರ್ಥತೆ ಮತ್ತು ಒಳಜಗಳದ ನೇರ ಪರಿಣಾಮ.

ಜನರ ಹಿತಕ್ಕಿಂತ ಕಮಿಷನ್ ಮತ್ತು ರಾಜಕೀಯ ಲಾಭವೇ ಮುಖ್ಯವಾದರೆ, ಯಾವ ಉದ್ಯಮಿ ಇಲ್ಲಿ ಬಂಡವಾಳ ಹೂಡಲು ಬರುವರು? ಗುಂಡಿಗಳ ನಗರ, ಕಸದ ನಗರ “ಸಿಲಿಕಾನ್ ವ್ಯಾಲಿ” ಖ್ಯಾತಿಯ ಬೆಂಗಳೂರಿನ ಈ ಹಾಲಿ ಸ್ಥಿತಿ ಸರ್ಕಾರದ ವಿಫಲತೆಯ ಪ್ರತಿಬಿಂಬ. ಅಭಿವೃದ್ಧಿಯ ದೂರದೃಷ್ಟಿಯಿಲ್ಲದೆ ಕೇವಲ ಲುಲು ಮಾಲ್ ಕಟ್ಟುವುದರಿಂದ ರಾಜ್ಯ ಮುನ್ನಡೆಯದು.

ನಾಯಕರು ಕುರ್ಚಿ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಮುಳುಗಿರುವಾಗ, ಉದ್ಯಮಿಗಳು “ಟಾಟಾ” ಹೇಳಿ ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ ಇದು ಕರ್ನಾಟಕದ ಭವಿಷ್ಯಕ್ಕೆ ಎಚ್ಚರಿಕೆಯ ಗಂಟೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ