ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತಕ್ಕೆ ಬಲಿಯಾದವರ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಮಾಹಿತಿ ನೀಡಿದ್ದಾರೆ.
ಆರ್ ಸಿಬಿ ಟೀಂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಭಿಮಾನಿಗಳು ಕಾಲ್ತುಳಿತಕ್ಕೊಳಗಾಗಿದ್ದಾರೆ. ಈ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. 33 ಮಂದಿಗೆ ಗಾಯಗಳಾಗಿವೆ ಎಂದು ಸಿಎಂ ಖಚಿತಪಡಿಸಿದ್ದಾರೆ.
ಮೊದಲು ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯಾವುದೇ ದುರಂತ ಸಂಭವಿಸಿರಲಿಲ್ಲ. ಆದರೆ ಚಿನ್ನಸ್ವಾಮಿ ಮೈದಾನದ ಮುಂದೆ ದುರಂತ ಸಂಭವಿಸಿದೆ. ವಿಧಾನಸೌಧದ ಮುಂದೆಯೂ ಒಂದು ಲಕ್ಷ ಜನ ಸೇರಿದ್ದರು. ಆದರೆ ಚಿನ್ನಸ್ವಾಮಿ ಎದುರು ಇಂತಹ ದುರಂತ ಸಂಭವಿಸಬಹುದು ಎಂದು ನಾವು ಯಾರೂ ಊಹೆ ಮಾಡಿರಲಿಲ್ಲ ಎಂದು ಸಿಎಂ ಹೇಳಿದ್ದಾರೆ.
ಮೈದಾನದಲ್ಲಿ 30 ಸಾವಿರ ಜನ ಸೇರುವ ಸಾಮರ್ಥ್ಯವಿದೆ. ಆದರೆ 2 ರಿಂದ 3 ಲಕ್ಷ ಜನ ಬಂದಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ನಾನು ಸತ್ತ ಕುಟುಂಬದ ವಾರಸುದಾರರಿಗೆ ತಲಾ 10 ಲಕ್ಷ ರೂ.ಗಳನ್ನು ಪರಿಹಾರವಾಗಿ ಘೋಷಿಸುತ್ತೇನೆ. ಸುಮಾರು 11 ಜನ ಸತ್ತಿದ್ದಾರೆ. 11 ಜನರಿಗೆ 10 ಲಕ್ಷ ರೂ.ಗಳನ್ನು ಪರಿಹಾರ ಕೊಡುತ್ತೇವೆ. ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಸೂಚನೆ ನೀಡಿದ್ದೇನೆ. ಅವರ ಚಿಕಿತ್ಸೆ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಘೋಷಿಸಿದ್ದಾರೆ.