ಬೆಂಗಳೂರು: ಐಪಿಎಲ್ ಗೆದ್ದು ಬಂದ ಆರ್ ಸಿಬಿಗೆ ಸಂಭ್ರಮದ ಸ್ವಾಗತ ಮಾಡಿಕೊಳ್ಳಬೇಕಾದ ಹೊಸ್ತಿಲಲ್ಲಿ ಚಿನ್ನಸ್ವಾಮಿ ಕಾಲ್ತುಳಿತದಿಂದ ದುರಂತವೇ ನಡೆದು ಹೋಗಿದೆ. ಈ ವೇಳೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ.
ಚಿನ್ನಸ್ವಾಮಿ ಮೈದಾನಕ್ಕೆ ಆಟಗಾರರು ಬರುತ್ತಾರೆ ಎಂದು ತಿಳಿದು ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ಯುವಕರು ಬಂದು ಸೇರಿದ್ದರು. ಗೇಟ್ ಬಳಿ ಒಮ್ಮೆಲೆ ಜನ ನುಗ್ಗಲಾಗಿತ್ತು. ಗೇಟ್ ಒಳಗೆ ಹೋಗುವ ಪ್ರಯತ್ನದಲ್ಲಿ ಸಿಮೆಂಟ್ ಸ್ಲ್ಯಾಬ್ ಮೇಲೆ ಏಕಾಏಕಿ ಜನ ನಿಂತಿದ್ದಾಗ ಅದು ಕುಸಿದು ಬಿತ್ತು.
ಒಬ್ಬರು ಬಿದ್ದಾಗ ಅವರ ಮೇಲೆ ಸಾಕಷ್ಟು ಜನ ಬಿದ್ದು ಸಾವುಗಳಾಗಿವೆ. ಮೃತರೆಲ್ಲರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮೃತರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು, ಮಕ್ಕಳು, ಯುವಕರೇ ಸೇರಿದ್ದಾರೆ.
ಸ್ಥಳದಲ್ಲಿದ್ದ ಯುವಕರು ಅಸ್ವಸ್ಥರಾದವರಿಗೆ ಪ್ರಥಮ ಚಿಕಿತ್ಸೆ ಮಾಡುವ ಮೂಲಕ ಬದುಕಿಸುವ ಪ್ರಯತ್ನ ಮಾಡಿದ್ದರು. ಆದರೂ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಇದೀಗ ಕೆಲವೇ ಕ್ಷಣಗಳಲ್ಲಿ ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಲಿದ್ದು ಅಧಿಕೃತವಾಗಿ ಸಾವನ್ನಪ್ಪಿದವರ ನಿಖರ ಸಂಖ್ಯೆ ಬಗ್ಗೆ ಮಾಹಿತಿ ನೀಡಲಿದ್ದಾರೆ.