Chinnaswamy stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಆರ್ ಸಿಬಿ ವಿರುದ್ಧವೇ ಕೇಸ್

Krishnaveni K

ಗುರುವಾರ, 5 ಜೂನ್ 2025 (19:38 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಈಗ ಆರ್ ಸಿಬಿ ಫ್ರಾಂಚೈಸಿ ಮತ್ತು ಕೆಎಸ್ ಸಿಎ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆ ಮೂಲಕ ಗೆದ್ದ ಖುಷಿಯಲ್ಲಿದ್ದ ಆರ್ ಸಿಬಿಗೆ ದೊಡ್ಡ ಶಾಕ್ ಎದುರಾಗಿದೆ.

ನಿನ್ನೆ ಆರ್ ಸಿಬಿ ಆಟಗಾರರು ಬೆಂಗಳೂರಿಗೆ ಬಂದು ಸಂಭ್ರಮಾಚರಣೆ ಮಾಡುವ ಹಿನ್ನಲೆಯಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ ಏಕಾಏಕಿ ಲಕ್ಷಾಂತರ ಜನ ನುಗ್ಗಿದ್ದರು. ಈ ವೇಳೆ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರೆ ಹಲವರಿಗೆ ಗಾಯಗಳಾಗಿತ್ತು. ಹೀಗಾಗಿ ಸಂಭ್ರಮವಾಗಿದ್ದ ಸಮಾರಂಭಕ್ಕೆ ಸೂತಕದ ಛಾಯೆ ಆವರಿಸಿತು.

ಘಟನೆ ಬಗ್ಗೆ ಈಗ ನಾನಾ ಆರೋಪಗಳು-ಪ್ರತ್ಯಾರೋಪಗಳು ನಡೆಯುತ್ತಿವೆ. ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೇ ಇರುವುದು ಘಟನೆಗೆ ಕಾರಣ ಎಂದು ವಿಪಕ್ಷಗಳು ಹೇಳುತ್ತಿದ್ದರೆ ಇನ್ನೊಂದೆಡೆ ಕೆಎಸ್ ಸಿಎ ಮತ್ತು ಆರ್ ಸಿಬಿ ಮೈದಾನಕ್ಕೆ ಉಚಿತ ಪ್ರವೇಶ ಘೋಷಿಸಿದ್ದೇ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ.

ಇದೀಗ ಘಟನೆ ಬಗ್ಗೆ ಡಿಸಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಸಿಎಂ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಕೆಎಸ್ ಸಿಎ ಮತ್ತು ಆರ್ ಸಿಬಿ ಫ್ರಾಂಚೈಸಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಅನುಮತಿ ಪಡೆಯದೇ ಕೆಎಸ್ ಸಿಎ ಮತ್ತು ಆರ್ ಸಿಬಿ ವಿಕ್ಟರಿ ಪೆರೇಡ್ ಬಗ್ಗೆ ಘೋಷಣೆ ಮಾಡಿದ್ದೇ ಅನಾಹುತಕ್ಕೆ ಕಾರಣ ಎಂಬ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ