ಇಂದು ಸಿಎಂ ನೇತೃತ್ವದ ಸಭೆ: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ? ಭಾಗಶಃ ಲಾಕ್ಡೌನ್?

ಶನಿವಾರ, 14 ಆಗಸ್ಟ್ 2021 (07:51 IST)
ಬೆಂಗಳೂರು: ಕೋವಿಡ್ ಮೂರನೇ ಅಲೆ ನಿರ್ವಹಣೆಗೆ ಮುನ್ನೆಚ್ಚರಿಕೆ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶನಿವಾರ ಮಹತ್ವದ ಸಭೆ ನಡೆಯಲಿದೆ. ಶಾಲೆ ಪುನರಾರಂಭ, ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಇನ್ನಿತರ ಮುಖ್ಯ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಸದ್ಯಕ್ಕೆ ಮಹಾರಾಷ್ಟ್ರ ಮತ್ತು ಕೇರಳ ಗಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಜನಸಂಚಾರ ಹೆಚ್ಚುತ್ತಿರುವುದರಿಂದ ನಿರ್ಬಂಧ ಹೇರಬೇಕು. ರಾಜ್ಯದ ಇತರ ಜಿಲ್ಲೆಗಳಲ್ಲೂ ಪರಿಸ್ಥಿತಿಗೆ ಅನುಗುಣವಾಗಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಜ್ಞರ ಸಮಿತಿ ಸರಕಾರಕ್ಕೆ ಸಲಹೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ನಡೆಯುವ ಸಭೆ ಮಹತ್ವದ್ದಾಗಿದೆ. ಶನಿವಾರ ಸಂಜೆ 4 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಈ ಸಭೆ ನಡೆಯಲಿದ್ದು, ಉನ್ನತಾಧಿಕಾರಿಗಳು ಭಾಗಿಯಾಗಲಿದ್ದಾರೆ. ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳಲಾಗುತ್ತಿದೆ.
ಗಡಿ ಆತಂಕ!
ಎರಡನೇ ಅಲೆ ಸಂದರ್ಭದಲ್ಲಿ ಗಡಿ ಬಂದ್ ಮಾಡದಿರುವುದರಿಂದ ಪರಿಸ್ಥಿತಿ ಕೈಮೀರಿತ್ತು. ಮಹಾರಾಷ್ಟ್ರದಲ್ಲಿ ಕೋವಿಡ್ ಎರಡನೇ ಅಲೆ ಅಬ್ಬರಿಸುತ್ತಿದ್ದಾಗಲೇ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೆ ರಾಜ್ಯದಲ್ಲಿ ತಕ್ಕ ಮಟ್ಟಿಗೆ ನಿಯಂತ್ರಣ ಮಾಡಬಹುದಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ತಜ್ಞರ ಸಮಿತಿ ಕೂಡ ಅಗತ್ಯ ಕ್ರಮದ ಬಗ್ಗೆ ಸಾಕಷ್ಟು ಮುಂಚಿತವಾಗಿ ಶಿಫಾರಸು ಮಾಡಿದ್ದರೂ ಲಾಕ್ಡೌನ್ ಜಾರಿಗೆ ಹಿಂದೇಟು ಹಾಕಲಾಯಿತು ಎಂಬ ಆಕ್ಷೇಪವಿತ್ತು.
ಇದರ ನಡುವೆ ಕೋವಿಡ್ ಎರಡನೇ ಅಲೆಯಿಂದ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿತ್ತು. ಮತ್ತೆ ಇಂತಹ ಸನ್ನಿವೇಶ ಸೃಷ್ಟಿಯಾಗಬಾರದು ಎಂದು ಈಗಾಗಲೇ ಗಡಿ ಜಿಲ್ಲೆಗಳಲ್ಲಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಇಳಿಮುಖವಾಗಿಲ್ಲ. ಸದ್ಯಕ್ಕೆ ಬಸ್ ಇನ್ನಿತರ ವಾಹನಗಳಲ್ಲಿ ರಸ್ತೆ ಮೂಲಕ ಸಂಚಾರ ಮಾಡುವವರನ್ನು ಗಡಿ ಜಿಲ್ಲೆಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಟ್ರೇನ್ ಮೂಲಕವೂ ಜನರು ಬರುತ್ತಿದ್ದಾರೆ. ಮುಂಬಯಿ ಮುಂತಾದ ನಗರಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಪ್ರದೇಶಗಳಿಗೆ ಟ್ರೇನ್ನಲ್ಲಿ ಜನರು ಬರುತ್ತಿದ್ದಾರೆ. ಹಾಗಾಗಿ ಈ ಬಗ್ಗೆಯೂ ಲಕ್ಷ್ಯ ಹರಿಸಬೇಕಾದ ಅಗತ್ಯವಿದೆ. ಈ ಸಂಬಂಧದಲ್ಲೂ ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ವೀಕೆಂಡ್ ಕರ್ಫ್ಯೂಗೆ ತಜ್ಞರ ಒಲವು!
ಮೂರನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುವುದರಿಂದ ಮಾರುಕಟ್ಟೆ ಮುಂತಾದ ಸ್ಥಳಗಳಲ್ಲಿ ಹೆಚ್ಚು ಜನ ಸೇರುತ್ತಾರೆ. ಇದರಿಂದ ಸೋಂಕು ಪ್ರಸರಣ ಹೆಚ್ಚಬಹುದು. ಹಾಗಾಗಿ ಈಗಲೇ ನಿರ್ಬಂಧ ಹೇರಿ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸಬೇಕು. ಜತೆಗೆ ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯವಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಸಂದರ್ಭಾನುಸಾರ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ತಜ್ಞರು ಸರಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಶಾಲಾರಂಭದ ಬಗ್ಗೆಯೂ ಸ್ಪಷ್ಟತೆ
ಆಗಸ್ಟ್ 23ರಿಂದ 9-12ನೇ ತರಗತಿ ಪುನರಾರಂಭದ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಸೋಂಕು ತಗ್ಗಿದರೆ ಪ್ರಾಥಮಿಕ ಶಾಲಾ ತರಗತಿಗಳನ್ನೂ ಆರಂಭಿಸುವ ಬಗ್ಗೆ ಶಿಕ್ಷಣ ಸಚಿವರು ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆ ಅಭಿಪ್ರಾಯವನ್ನು ಶಿಕ್ಷಣ ಇಲಾಖೆ ಕೇಳಿದೆ. ಅದನ್ನು ಆಧರಿಸಿ ಸೋಮವಾರ ವಿವರವಾದ ಮಾರ್ಗಸೂಚಿ ಹೊರಡಿಸಲು ಚಿಂತನೆ ನಡೆಸಲಾಗಿದೆ. ಆದರೆ, ಶಾಲಾರಂಭ ಸೂಕ್ತವೋ ಅಲ್ಲವೋ ಎಂಬ ಬಗ್ಗೆಯೂ ಸಿಎಂ ಅಧ್ಯಕ್ಷತೆ ಸಭೆಯಲ್ಲಿ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ. ಈ ತಿಂಗಳಾಂತ್ಯಕ್ಕೆ ಶಾಲೆ ಪುನರಾರಂಭ ಮಾಡುವುದಾದರೆ ಅದರ ಮಾರ್ಗಸೂಚಿ ಹೇಗಿರಬೇಕು ಎಂಬ ಬಗ್ಗೆಯೂ ಈ ಸಭೆ ತೀರ್ಮಾನಿಸುವ ಸಾಧ್ಯತೆಯಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ