ಭೈರತಿ ಸುರೇಶ್ ಪುತ್ರನ ನಿಶ್ಚಿತಾರ್ಥದಲ್ಲಿ ಡಿಕೆ ಶಿವಕುಮಾರ್, ರಾಜ್ಯಪಾಲ ಗೆಹ್ಲೋಟ್ ದೋಸ್ತಿ

Krishnaveni K

ಬುಧವಾರ, 28 ಆಗಸ್ಟ್ 2024 (15:24 IST)
Photo Credit: X
ಬೆಂಗಳೂರು: ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಸಚಿವ ಭೈರತಿ ಸುರೇಶ್ ಪುತ್ರನ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅದನ್ನೆಲ್ಲಾ ಮರೆತು ದೋಸ್ತುಗಳಂತೆ ಕಂಡುಬಂದಿದ್ದಾರೆ.

ಮುಡಾ ಹಗರಣದಲ್ಲಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಲೇ ಇದೆ. ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲೂ ಸಜ್ಜಾಗಿದ್ದರು.

ಈ ಬೆಳವಣಿಗೆ ಹಿನ್ನಲೆಯಲ್ಲಿ ರಾಜ್ಯಪಾಲರಿಗೆ ಭದ್ರತೆ ಹೆಚ್ಚಿಸಲಾಗಿತ್ತು. ಸಾರ್ವಜನಿಕ ಕಾರ್ಯಕ್ರಮಗಳಿಂದಲೂ ದೂರವಾಗಿದ್ದರು. ಆದರೆ ಇದೆಲ್ಲದರ ನಡುವೆ ಇಂದು ರಾಜ್ಯಪಾಲರು ಭೈರತಿ ಸುರೇಶ್ ಪುತ್ರನ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಕೂಡಾ ಬಂದಿದ್ದಾರೆ. ಆದರೆ ರಾಜಕೀಯ ವೈಷಮ್ಯ ಮರೆತು ಅಲ್ಲಿದ್ದಷ್ಟು ಹೊತ್ತೂ ಡಿಕೆಶಿ ಮತ್ತು ರಾಜ್ಯಪಾಲರು ಜೊತೆಗೇ ನಗು ನಗುತ್ತಾ ದೋಸ್ತುಗಳಂತೆ ಕಾಲ ಕಳೆದರು. ಬಳಿಕ ಅಕ್ಕಪಕ್ಕವೇ ಕುಳಿತು ಊಟ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ