ಒಂದೇ ಕುಟುಂಬದ ನಾಲ್ವರು ಸಜೀವ ದಹನ!

ಗುರುವಾರ, 21 ಫೆಬ್ರವರಿ 2019 (16:31 IST)
ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಬದಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ.

ಹಾಸನದ ಚನ್ನರಾಯಪಟ್ಟಣದ ಬಳಿ ಮುಂಜಾನೆ ಈ ದುರ್ಘಟನೆ ನಡೆದಿದೆ. ಬೆಂಗಳೂರಿನ ಚಿಕ್ಕಬಾಣವಾರದ ವಿವೇಕ್ ನಾಯಕ್, ಅವರ ಪತ್ನಿ ರೇಷ್ಮಾ ನಾಯಕ್, ಪುತ್ರಿ ವಿನಂತಿ ನಾಯಕ್ (9), ಮತ್ತೊಬ್ಬ ಮಗ ಮೃತಪಟ್ಟಿದ್ದಾರೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವಿವೇಕ್ ನಾಯಕ್, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕರೆದುಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಮುಂಜಾನೆ 5 ವೇಳೆ ಕಾರಿನಲ್ಲಿ ಬರುತ್ತಿದ್ದರು. ನಿದ್ದೆ ಮಂಪರಿನಲ್ಲಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ವಿವೇಕ್ ನಾಯಕ್, ಚನ್ನರಾಯಪಟ್ಟಣದ ಉದಯಪುರ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆ ಪಕ್ಕದ ಶೌಚಾಲಯ ಕಟ್ಟಡದ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಡೀಸೆಲ್ ಟ್ಯಾಂಕ್  ಒಡೆದು ಬೆಂಕಿ ಹತ್ತಿಕೊಂಡು ಕಾರಿನಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದಾರೆ. ಸ್ಥಳೀಯರು ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಇಡೀ ಕಾರು ಸುಟ್ಟು ಹೋಗಿದ್ದು, ಅದರಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದಾರೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ