ಮಂಗಳೂರು: ಪ್ರತೀ ವರ್ಷವೂ ಮಳೆ ಬಂದ ಬೆನ್ನಲ್ಲೇ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಆತಂಕ ಶುರುವಾಗುತ್ತದೆ. ಒಂದೇ ಮಳೆಗೆ ಈಗ ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತವಾಗಿದ್ದು, ಪ್ರಯಾಣಕ್ಕೆ ತೊಂದರೆ ಎದುರಾಗಿದೆ.
ಕಳೆದ ವರ್ಷವಂತೂ ಮಳೆಗಾಲದಲ್ಲಿ ಮಂಗಳೂರು-ಬೆಂಗಳೂರು ನಡುವೆ ಸಂಚಾರ ಭಾಗಶಃ ಬಂದ್ ಆಗಿತ್ತು. ಶಿರಾಡಿ ಘಾಟಿ, ಚಾರ್ಮಾಡಿ ಘಾಟಿ ಎರಡರಲ್ಲೂ ಭೂ ಕುಸಿತವಾಗಿ ರಸ್ತೆ ಮಾರ್ಗವಾಗಿ ಸಂಚರಿಸುವುದೇ ಕಷ್ಟವಾಗಿತ್ತು. ಅತ್ತ ರೈಲು ಮಾರ್ಗವೂ ಬಂದ್ ಆಗಿ ಸಾಮಾನ್ಯ ಜನರಿಗೆ ಕರಾವಳಿ ನಗರಕ್ಕೆ ಹೋಗುವುದು ಕಷ್ಟವಾಗಿತ್ತು.
ಇದೀಗ ಶಿರಾಡಿ ಘಾಟಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರ ನಡುವೆ ಮುಂಗಾರು ಬೇಗನೇ ಶುರುವಾಗಿದ್ದು, ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಗುಡ್ಡ ಕುಸಿತ ಪ್ರಕರಣ ಕಂಡುಬರುತ್ತಿದೆ. ಎರಡೇ ದಿನದ ಮಳೆಗೆ ಈ ಅವಸ್ಥೆಯಾಗಿದೆ
ನಿನ್ನೆ ಶಿರಾಡಿ ಘಾಟಿಯಲ್ಲಿ ಎರಡು ಕಡೆ ಗುಡ್ಡ ಕುಸಿತವಾದ ಘಟನೆ ದಾಖಲಾಗಿದೆ. ಹೀಗಾಗಿ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಕೂಡಾ ಕಂಡುಬಂದಿದೆ. ಇನ್ನಷ್ಟು ದಿನ ಮಳೆಯಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಕಳೆದ ವರ್ಷ ಆಗುಂಬೆ ಮಾರ್ಗವಾಗಿ ಕೆಲವು ದಿನ ಬಸ್ ಸಂಚಾರ ಮಾಡಿದ ಉದಾಹರಣೆಯೂ ಇದೆ. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮುಂದಿನ ಎರಡು ತಿಂಗಳಿಗೆ ಕರಾವಳಿ ಭಾಗಕ್ಕೆ ಹೋಗುವುದು ಅಥವಾ ಅಲ್ಲಿಂದ ಬೆಂಗಳೂರಿಗೆ ಬರುವುದು ಆದಷ್ಟು ತಪ್ಪಿಸಿದರೆ ಒಳ್ಳೆಯದು.