ಬಿಡಿಎನಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಲೋಕಾಯುಕ್ತ ಕಚೇರಿಗೆ ದೂರು

ಶುಕ್ರವಾರ, 10 ಫೆಬ್ರವರಿ 2023 (19:07 IST)
ಭ್ರಷ್ಟಾಚಾರದ ಕೂಪವೆಂಬಂತೆ ಬಿಂಬಿತವಾಗಿರುವ ಬಿಡಿಎ ಪ್ರಧಾನ ಕಚೇರಿ ಮೇಲೆ ಲೋಕಾಯುಕ್ತ ನೇತೃತ್ವದ ತಂಡ ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್ ನೀಡಿದೆ. ದಾಖಲೆಗಳನ್ನ ವಶಪಡಿಸಿಕೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಬಿಡಿಎನಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಲೋಕಾಯುಕ್ತ ಕಚೇರಿಗೆ ಸಾಲು-ಸಾಲು ದೂರುಗಳು ಬಂದಿದ್ದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನೇತೃತ್ವದ ಆರು ತಂಡವಿರುವ 35 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ನೇತೃತ್ವದ ತಂಡ ದಾಳಿ ನಡೆಸಿ ಮಹತ್ವದ ದಾಖಲಾತಿ ವಶಕ್ಕೆ ಪಡೆದುಕೊಂಡಿದೆ. ಬಿಡಿಎ ಪ್ರಧಾನ ಕಚೇರಿ ಸೇರಿ ನಗರದಲ್ಲಿರುವ ವಿವಿಧ ಉಪ ಬಿಡಿಎ ಕಚೇರಿಗಳ ಮೇಲೆ ದಾಳಿ ನಡೆಸಿ ಎಸಿಬಿಯು ಕಳೆದ ವರ್ಷ ರಚನೆಯಾಗಿ ಬಲವರ್ಧನೆಗೊಂಡಿದ್ದ ಲೋಕಾಯುಕ್ತರಿಗೆ ತನಿಖಾ ವರದಿ ನೀಡಿತ್ತು‌. ಈ ಬಗ್ಗೆಯೂ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಬಂದಿದ್ದರಿಂದ ದಾಳಿ ನಡೆಸಲಾಗಿದೆ‌.
 
 ಸಾರ್ವಜನಿಕರಿಂದ ಎಲ್ಲಾ ರೀತಿಯ ದೂರುಗಳು ಬಂದಿದ್ದು ಕಡತಗಳನ್ನ ಪರಿಶೀಲನೆ ನಡೆಸುತ್ತಿದ್ದು ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡಲಾಗುವುದು ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ಹೇಳಿದರು.ಬಿಡಿಎನಲ್ಲಿರುವ ನಗರ ಯೋಜನಾ ವಿಭಾಗ, ಎಂಜಿನಿಯರಿಂಗ್, ಭೂಸ್ವಾಧೀನ ಹಾಗೂ ಪರಿಹಾರ ಮತ್ತು ಸೈಟ್ ಪ್ಲಾನಿಂಗ್ ವಿಭಾಗಗಳ ಮೇಲೆ ದಾಳಿ ನಡೆಸಲಾಗಿದೆ‌‌. 
ಬೇರೆಯವರಿಗೆ ನೋಂದಣಿಯಾಗಿರುವ ನಿವೇಶನ ಮಾರಾಟ, ಪರಿಹಾರ ವಿತರಿಸಲು ವಿಳಂಬ, ಸೈಟು ಪ್ಲಾನಿಂಗ್ ಪಡೆಯಲು ಲಂಚ ಹೀಗೆ ತರಹೇವಾರಿ ದೂರುಗಳು ಕೇಳಿಬಂದಿದ್ದರಿಂದ ಈ ದಾಳಿ ನಡೆಸಲಾಗಿದೆ‌.ಬಿಡಿಎ ಕಚೇರಿ ದಾಳಿ ಸಂಬಂಧ ಸ್ಥಳಕ್ಕೆ ಇದೇ ಮೊದಲ ಬಾರಿಗೆ ಖುದ್ದು ಸ್ಥಳಕ್ಕೆ ಬಂದು ಲೋಕಾಯುಕ್ತ ಬಿ‌.ಎಸ್.ಪಾಟೀಲ್ ಬಂದು ಪರಿಶೀಲನೆ ನಡೆಸಿದರು.‌ ದಾಳಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಆಗಿರುವ ಅಕ್ರಮ ಬಗ್ಗೆ ಇಂಚಿಂಚೂ ಮಾಹಿತಿ ಪರಿಶೀಲಿಸಿ‌ ವರದಿ ನೀಡಬೇಕು. ಯಾವ ವಿಭಾಗದಲ್ಲಿ ದೂರುದಾರರಿಗೆ ವಂಚನೆಯಾಗಿದೆ.. ಈ ಬಗ್ಗೆ ದೂರುದಾರರನ್ನು ಸಂಪರ್ಕಿಸಿ ಹೇಳಿಕೆ ಪಡೆದುಕೊಳ್ಳಿ. ಸಾರ್ವಜನಿಕರಿಂದ ಆಗಿರುವ ಅನ್ಯಾಯ ಮುಂದೆ ಆಗಬಾರದು.. ರಾತ್ರಿ 12 ಗಂಟೆಯಾದರೂ ಪರ್ವಾಗಿಲ್ಲ.. ಕೂಲಂಕುಷವಾಗಿ ಪರಿಶೀಲಿಸಿ ದಾಳಿ ಮುಕ್ತಾಯಗೊಳಿಸಬೇಕು ಎಂದು ಅಧಿಕಾರಿಗಳಿಗೆ ಲೋಕಾಯುಕ್ತರು ತಾಕೀತು ಮಾಡಿದರು.ಒಟ್ಟಿನಲ್ಲಿ ಒಂದಾಲ್ಲ ಒಂದು ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಬಿಡಿಎ ಯ ಕರ್ಮಕಾಂಡ ಯಾವಾಗ ಮುಗಿಯುತ್ತೋ ಅ ಭಗವಂತನೇ ಬಲ್ಲ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ