ಆಷಾಢ ಶುಕ್ರವಾರ ಚಾಮುಂಡಿ ತಾಯಿ ದರ್ಶನಕ್ಕೆ ಸಾಮಾನ್ಯರಿಗೆ ರಷ್: ವಿಐಪಿಯಾಗಿ ಬಂದ ಸೂರಜ್ ರೇವಣ್ಣ

Krishnaveni K

ಶುಕ್ರವಾರ, 26 ಜುಲೈ 2024 (14:37 IST)
ಮೈಸೂರು: ಆಷಾಢ ಶುಕ್ರವಾರದಂದು ಚಾಮುಂಡಿ ದರ್ಶನ ಪಡೆಯಲು ಸಾಕಷ್ಟು ಜನ ನಾಡದೇವತೆಯ ಸನ್ನಿಧಾನಕ್ಕೆ ಬರುತ್ತಾಳೆ. ಇಂದೂ ಕೂಡಾ ಚಾಮುಂಡಿ ದೇವಾಲಯದಲ್ಲಿ ಸಾಕಷ್ಟು ಭಕ್ತರು ಸೇರಿದ್ದರು. ಈ ನಡುವೆ ಇತ್ತೀಚೆಗಷ್ಟೇ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಎಂಎಲ್ ಸಿ ಸೂರಜ್ ರೇವಣ್ಣ ವಿಐಪಿ ಸಾಲಿನಲ್ಲಿ ಬಂದು ಪೂಜೆ ಸಲ್ಲಿಸಿದ್ದಾರೆ.

ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಮೇಲೆ ಹೊಳೆನರಸೀಪುರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿ ತನಿಖೆಗೊಳಪಡಿಸಿದ್ದರು.

ಕಳೆದ ಕೆಲವು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದ ಸೂರಜ್ ಮೊನ್ನೆಯಷ್ಟೇ ಬೇಲ್ ಪಡೆದು ಹೊರಬಂದಿದ್ದರು. ಇದೀಗ ಹೊರಬಂದ ಬೆನ್ನಲ್ಲೇ ಇಂದು ಆಷಾಢ ಶುಕ್ರವಾರದಂದು ನಾಡದೇವತೆಯ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಆಷಾಢ ಶುಕ್ರವಾರ ನಿಮಿತ್ತ ಚಾಮುಂಡಿ ಬೆಟ್ಟದಲ್ಲಿ ಇಂದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದರು.

ಈ ವೇಳೆ ಬಂದ ಸೂರಜ್ ರೇವಣ್ಣ ವಿಐಪಿ ಸಾಲಿನಲ್ಲಿ ತೆರಳಿ ದೇವಿ ಮುಂದೆ ನಿಂತು ಹಣ್ಣು-ಕಾಯಿ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಅರ್ಚಕರು ಹೂವಿನ ಹಾರ ಹಾಕಿ ಕುಂಕುಮವಿಟ್ಟು ಆಶೀರ್ವದಿಸಿದರು. ತನ್ನ ಮೇಲಿರುವ ಕೇಸ್ ನಿಂದ ಪಾರು ಮಾಡುವಂತೆ ಸೂರಜ್ ದೇವಿ ಬಳಿ ಮೊರೆಯಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ