ಮೀಸಲಾತಿ ಪಾಲನೆ: ನ್ಯಾಷನಲ್ ಲಾ ಸ್ಕೂಲ್ ಗೆ ಉನ್ನತ ಶಿಕ್ಷಣ ಸಚಿವರ ಪತ್ರ

ಶುಕ್ರವಾರ, 6 ಜನವರಿ 2023 (20:29 IST)
ಬೆಂಗಳೂರು ವಿವಿ ಆವರಣದಲ್ಲಿ ಇರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಕೂಡ ಸರಕಾರದ ನಿಯಮದಂತೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸ್ಥಳೀಯ ಮೀಸಲಾತಿ ಕೊಡಬೇಕು. ಈ ಸಂಬಂಧ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಕುಲಪತಿಗೆ ಪತ್ರ ಬರೆದಿದ್ದಾರೆ.
 
ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಶೇಕಡ 25ರ ಸ್ಥಳೀಯ ಮೀಸಲಾತಿ ಕೊಡುತ್ತಿಲ್ಲ.  ಬದಲಿಗೆ ಅಖಿಲ ಭಾರತ ಕೋಟಾದಡಿ ಮೆರಿಟ್ ಮೇಲೆ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನೇ ಈ ಮೀಸಲಾತಿ ವ್ಯಾಪ್ತಿಗೆ ತರುತ್ತಿರುವುದು ಸರಕಾರದ ನಿಯಮಗಳ ಉಲ್ಲಂಘನೆಯಾಗಿದೆ. ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
 
ಹೈದರಾಬಾದ್, ಕೋಲ್ಕತ್ತಾ, ತಿರುಚಿನಾಪಳ್ಳಿ, ವಿಶಾಖಪಟ್ಟಣ, ರಾಯ್ ಪುರ ಮುಂತಾದ ಕಡೆಗಳಲ್ಲಿ ಇರುವ ಇಂತಹುದೇ ಸಂಸ್ಥೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಇದರಂತೆ ಇಲ್ಲಿನ ನ್ಯಾಷನಲ್ ಲಾ ಸ್ಕೂಲ್ ಕೂಡ 2020ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ 
ನಿಯಮಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ನಿರ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ