ಸುಮಲತಾ ಈ ಬಾರಿಯೂ ಪ್ರಚಾರ ಮಾಡ್ತಾರಾ ಜೋಡೆತ್ತು ದರ್ಶನ್-ಯಶ್

Krishnaveni K

ಸೋಮವಾರ, 26 ಫೆಬ್ರವರಿ 2024 (10:44 IST)
Photo Courtesy: Twitter
ಬೆಂಗಳೂರು: ಸುಮಲತಾ ಅಂಬರೀಶ್ ಪರ ಈ ಬಾರಿಯೂ ಜೋಡೆತ್ತುಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ ಸುಮಲತಾ ಉತ್ತರಿಸಿದ್ದಾರೆ.

ಈ ಬಾರಿಯೂ ಬಿಜೆಪಿ ಟಿಕೆಟ್ ನಲ್ಲಿಯೇ ಮಂಡ್ಯದಿಂದಲೇ ಸ್ಪರ್ಧೆ ಮಾಡುವುದಾಗಿ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಒಂದೆಡೆ ಮಿತ್ರ ಪಕ್ಷ ಜೆಡಿಎಸ್ ಕೂಡಾ ಮಂಡ್ಯ ಟಿಕೆಟ್ ಗಾಗಿ ಬೇಡಿಕೆಯಿಟ್ಟಿದೆ. ಆದರೆ ಸುಮಲತಾ ಮಂಡ್ಯ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಈಗಾಗಲೇ ಸುಮಲತಾ ಮಂಡ್ಯದಿಂದ ಸ್ಪರ್ಧಿಸುವುದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೆ ಮುನ್ನ ಸ್ಥಳೀಯ ನಾಯಕರೊಂದಿಗೆ ಸಭೆ ಕೂಡಾ ನಡೆಸಿದ್ದಾರೆ. ಆ ಮೂಲಕ ಮಂಡ್ಯ ತಮಗೇ ಬಿಟ್ಟುಕೊಡಬೇಕು ಎಂದು ವರಿಷ್ಠರಿಗೂ ಸಂದೇಶ ರವಾನಿಸಿದ್ದಾರೆ.

ಕಳೆದ ಬಾರಿ ಸುಮಲತಾ ಮಂಡ್ಯದಿಂದ ಸ್ಪರ್ಧಿಸಿದ್ದಾಗ ಜೋಡೆತ್ತುಗಳಂತೆ ಕಾರ್ಯನಿರ್ವಹಿಸಿದ್ದ ದರ್ಶನ್-ಯಶ್ ಜೋಡಿಯ ಪ್ರಚಾರದಿಂದಾಗಿ ಗೆಲುವು ಕಂಡಿದ್ದರು. ಇಬ್ಬರೂ ಉರಿಬಿಸಿಲನ್ನು ಲೆಕ್ಕಿಸದೇ ಮಂಡ್ಯದ ತುಂಬಾ ಓಡಾಡಿ ಪ್ರಚಾರ ನಡೆಸಿದ್ದರು. ಈ ಬಾರಿಯೂ ದರ್ಶನ್ ಮತ್ತು ಯಶ್ ಒಟ್ಟಿಗೇ ಪ್ರಚಾರ ನಡೆಸಲಿದ್ದಾರಾ ಎಂಬ ಪ್ರಶ್ನೆಗೆ ಸುಮಲತಾ ಉತ್ತರಿಸಿದ್ದಾರೆ.

ಈ ಬಾರಿಯೂ ದರ್ಶನ್ ಪ್ರಚಾರಕ್ಕೆ ಬರುವುದು ಖಚಿತ ಎಂದಿದ್ದಾರೆ. ದರ್ಶನ್ ಗೆ ಪಕ್ಷದ ಹಂಗಿಲ್ಲ. ನೀವು ಯಾವ ಪಕ್ಷದಿಂದ, ಎಲ್ಲಿಂದ ಸ್ಪರ್ಧಿಸಿದರೂ ನಿಮ್ಮ ಪರವಾಗಿ ಪ್ರಚಾರ ಮಾಡಲು ಬರುತ್ತೇನೆ ಎಂದಿದ್ದಾರೆ. ಆದರೆ ಯಶ್ ಜೊತೆ ನಾನು ಇನ್ನೂ ಮಾತನಾಡಿಲ್ಲ. ಯಶ್ ಈಗ ಲಂಡನ್ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರ ಜೊತೆ ಮಾತುಕತೆ ನಡೆಸಲು ಸಾಧ‍್ಯವಾಗಿಲ್ಲ. ಅವರು ಬಂದ ಕೂಡಲೇ ಮಾತನಾಡುತ್ತೇನೆ ಎಂದಿದ್ದಾರೆ ಸುಮಲತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ