ಸಚಿವ ಸ್ಥಾನಕ್ಕೆ ಬೆಂಬಲಿಗರ ಪೂಜೆ, ಪತ್ರ, ಪ್ರತಿಭಟನೆ

ಬುಧವಾರ, 4 ಆಗಸ್ಟ್ 2021 (08:12 IST)
ಬೆಂಗಳೂರು (ಆ.04):  ರಾಜ್ಯ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಚುರುಕುಗೊಂಡಿರುವ ಬೆನ್ನಲ್ಲೇ, ತಮ್ಮ ಶಾಸಕರನ್ನು ಸಚಿವರನ್ನಾಗಿ ಮಾಡಿ ಎಂಬ ಬೆಂಬಲಿಗರ ಕೂಗು ಸಹ ಹೆಚ್ಚಾಗತೊಡಗಿವೆ. ಹಲವರು ವಿಶೇಷ ಪೂಜೆ ಸಲ್ಲಿಸುತ್ತಿದ್ದರೆ, ಮತ್ತೆ ಕೆಲವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ವರಿಷ್ಠರಿಗೆ ಪತ್ರ ಬರೆಯುವ ಮುಖೇನ ಒತ್ತಡ ಹಾಕುತ್ತಿದ್ದಾರೆ. ಮತ್ತೆ ಕೆಲವರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

• ರಾಜ್ಯ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಚುರುಕು
•ತಮ್ಮ ಶಾಸಕರನ್ನು ಸಚಿವರನ್ನಾಗಿ ಮಾಡಿ ಎಂಬ ಬೆಂಬಲಿಗರ ಕೂಗು
• ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ವರಿಷ್ಠರಿಗೆ ಪತ್ರ ಬರೆಯುವ ಮುಖೇನ ಒತ್ತಡ
ಹಾಲಾಡಿ ಪರ ಪತ್ರ ಅಭಿಯಾನ:
5 ಬಾರಿ ಶಾಸಕರಾಗಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಮಂತ್ರಿಸ್ಥಾನ ಕೊಡಬೇಕು ಎಂಬ ಕೂಗು ಕರಾವಳಿಯಾದ್ಯಂತ ಜೋರಾಗಿ ಕೇಳಿ ಬರುತ್ತಿದ್ದು ಅಭಿಮಾನಿಗಲು ಯಡಿಯೂರಪ್ಪನವರಿಗೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದ ಮೂಲಕ ಪತ್ರ ಅಭಿಯಾನ ಆರಂಭಿಸಿದ್ದಾರೆ.
ವಿಶೇಷ ಪೂಜೆ, ಪಾದಯಾತ್ರೆ:
ಇನ್ನು ಶಾಸಕ ಪ್ರೀತಮ್ ಜೆ.ಗೌಡ ಪರ ಕಾರ್ಯಕರ್ತರು ಹಾಸನದ ನೀರುಬಾಗಿಲು ಆಂಜನೇಯ ದೇವಸ್ಥಾನದಲ್ಲಿ, ದರ್ಗಾದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ ಪರವಾಗಿ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ 51 ಈಡುಗಾಯಿ ಹೊಡೆದು ಅಭಿಮಾನಿಗಳು ವಿಶೇಷ ಪೂಜೆ ಮಾಡಿದರು. ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಗಲಿ ಎಂದು ಹರಕೆ ಹೊತ್ತು ರಾಯಚೂರಿನ ಮಸ್ಕಿ ತಾಲೂಕಿನ ಮೂವರು ಯುವಕರು ಮಸ್ಕಿಯಿಂದ ಬಳ್ಳಾರಿವರೆಗೆ 120 ಕಿ.ಮೀ. ಪಾದಯಾತ್ರೆ ನಡೆಸಿ ಬಳ್ಳಾರಿಯ ಶ್ರೀಕನಕ ದುರ್ಗಮ್ಮಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಜಿ.ಸೋಮಶೇಖರ ರೆಡ್ಡಿ ಗೆ ಸಚಿವ ಸ್ಥಾನ ಮತ್ತು ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಬಳ್ಳಾರಿಯ ಬಿಜೆಪಿ ಬೆಂಬಲಿತ ಪಾಲಿಕೆ ಸದಸ್ಯರು ಒತ್ತಾಯಿಸಿದರು.
ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಿ:
ಸಚಿವ ಸಂಪುಟದಲ್ಲಿ ರೆಡ್ಡಿ ಜನಾಂಗಕ್ಕೆ ಪ್ರಾಮುಖ್ಯತೆ ನೀಡುವಂತೆ ಬಾಗಲಕೋಟೆಯಲ್ಲಿ ಅಖಿಲ ಭಾರತ ರೆಡ್ಡಿ ಒಕ್ಕೂಟ ಆಗ್ರಹಿಸಿದರೆ, ಆಯನೂರು ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸದಸ್ಯರು ಶಿವಮೊಗ್ಗದಲ್ಲಿ ಆಗ್ರಹಿಸಿದರು. ಇನ್ನು ಕನಿಷ್ಠ 4 ಮಂದಿ ಅಲ್ಪಸಂಖ್ಯಾತರಿಗೆ ಮಂತ್ರಿಸ್ಥಾನ, ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಶಿವಮೊಗ್ಗದ ಅಲ್ಪಸಂಖ್ಯಾತರ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ. ಮಂಡ್ಯ ಜಿಲ್ಲೆಯಿಂದ ನಾರಾಯಣಗೌಡರಿಗೆ ಸಚಿವ ಸ್ಥಾನ ಸಿಗಬೇಕೆಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ