Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

Sampriya

ಬುಧವಾರ, 18 ಜೂನ್ 2025 (19:08 IST)
ಅಹಮದಾಬಾದ್‌: ಜೂನ್‌ 12ರಂದು ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 270 ಮಂದಿಯ ಪೈಕಿ 190 ಮಂದಿಯ ಗುರುತು ಪತ್ತೆಯಾಗಿದೆ. ಗುರುತು ಪತ್ತೆಯಾದ 32 ಮಂದಿ ವಿದೇಶಿಗರೂ ಸೇರಿದಂತೆ 159 ಜನರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ .

ಕುಟುಂಬಸ್ಥರಿಗೆ ಹಸ್ತಾಂತರಿಸಲಾದ 127 ಭಾರತೀಯರ ಮೃತದೇಹಗಳ ಪೈಕಿ, 123 ಮಂದಿ ವಿಮಾನದ ಪ್ರಯಾಣಿಕರಾಗಿದ್ದರೆ, ನಾಲ್ವರು ಘಟನಾ ಸ್ಥಳದಲ್ಲಿದ್ದ ದುರ್ದೈವಿಗಳು ಎಂದು ಅವರು ತಿಳಿಸಿದರು.

ಭೀಕರ ವಿಮಾನ ಅವಘಡದಲ್ಲಿ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಉಳಿದವರ ಗುರುತು ಪತ್ತೆಗೆ ಡಿಎನ್ಎ ತಾಳೆ ನೋಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 

ವಿಮಾನ ಪತನದ ಸಂದರ್ಭದಲ್ಲಿ ಗಾಯಗೊಂಡು 71 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಏಳು ಮಂದಿ ಮಾತ್ರ ಅಹಮದಾಬಾದ್‌ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಸಂದರ್ಭದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್‌ ಅವರು ಗುಣಮುಖರಾಗಿದ್ದು ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆಯಿಂದ ಬುಧವಾರ ನಿರ್ಗಮಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ಬಳಿಕ ಅವರು ಅವಘಡದಲ್ಲಿ ಮೃತಪಟ್ಟ ಸಹೋದರ ಅಜಯ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ