ಬಿಲಾಸ್ಪುರ: ಬಾವಿಯೊಳಗೆ ಬಿದ್ದ ಕೋಳಿಯನ್ನು ಕಾಪಾಡಲು ಹೋಗಿ ಸಹೋದರರಿಬ್ಬರು ಧಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ ಮಾಹಿತಿ ಪ್ರಕಾರ, ವಿಷಕಾರಿ ಅನಿಲ ಸೇವಿಸಿ ಸಹೋದರರಿಬ್ಬರು ಛತ್ತೀಸಗಢದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.
ಬೆಲ್ಘಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಹಿ ಕಚಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಿನೇಶ್ ಪಟೇಲ್ (35) ಆರಂಭದಲ್ಲಿ ಬಾವಿಯೊಳಗೆ ಬಿದ್ದ ಕೋಳಿಯನ್ನು ಕಾಪಾಡಲು ಇಳಿದಿದ್ದರು.
ಬಳಿಕ ಕೆಲವೇ ಹೊತ್ತಿನಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಇದನ್ನು ಕಂಡು ದಿನೇಶ್ ಅವರ ಸಹೋದರ ದಿಲೀಪ್ ಪಟೇಲ್ (30) ಕೂಡ ಬಾವಿಗೆ ಇಳಿದಿದ್ದ. ಆದರೆ, ಆತ ಕೂಡ ಅಸ್ವಸ್ಥನಾಗಿದ್ದ ಎಂದು ಅವರು ಹೇಳಿದ್ದಾರೆ.
ಸ್ವಲ್ಪ ಸಮಯದವರೆಗೆ ಸಹೋದರರು ಬಾವಿಯಿಂದ ಹೊರಗೆ ಬಾರದಿದ್ದಾಗ ಸ್ಥಳೀಯರು ಮಾಹಿತಿ ನೀಡಿದ್ದರು. ಶುಕ್ರವಾರ ತಡರಾತ್ರಿ ಸಹೋದರರ ಶವಗಳನ್ನು ಹೊರತೆಗೆಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿದ ಪರಿಣಾಮ ಸಹೋದರರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.