ಕೇರಳದ ದೇವಸ್ಥಾನ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದ ಮುಸ್ಲಿಂ ಯುವಕರು

ಬುಧವಾರ, 22 ಆಗಸ್ಟ್ 2018 (14:44 IST)
ವಯನಾಡು: ಭೀಕರ ಪ್ರವಾಹಕ್ಕೆ ಸಿಕ್ಕಿ ಹಾನಿಗೊಳಗಾಗಿರುವ ಕೇರಳದ ವಯನಾಡು ಮತ್ತು ಮಲಪ್ಪುರಂ ದೇವಸ್ಥಾನಗಳನ್ನು ಮುಸ್ಲಿಂ ಯುವಕರ ತಂಡವು ಸ್ವಚ್ಛಗೊಳಿಸಿದೆ. ಈ ತಂಡದಲ್ಲಿರುವ ಯುವಕರಲ್ಲಿ ಹಲವರು ದೇವಸ್ಥಾನ ಶುಚಿಗೊಳಿಸುವ ದಿನ ಅರಾಫ್‌ ಉಪವಾಸ ವ್ರತದಲ್ಲಿದ್ದಾರಂತೆ.


ವೆನ್ನಿಯೋಡೆ ಶ್ರೀ ಮಹಾವಿಷ್ಣು ದೇಗುಲವು ವೆನ್ನಿಯೋಡಿ ನದಿಯ ಪ್ರವಾಹ ನುಗ್ಗಿ ಹಾಳಾಗಿತ್ತು. ಮುಕ್ಕಂನ ಮುಸ್ಲಿಮ್‌ ಯುವಕರ ತಂಡವು ದೇಗುಲದ ಕೆಸರು ತೆಗೆದು ಇಡೀ ಗೋಡೆ ಆವರಣ ಸಮೇತ ಸ್ವಚ್ಛಗೊಳಿಸಿದೆ. ದೇಗುಲ ಆಡಳಿತ ಸಮಿತಿಯ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಮುಸ್ಲಿಮ್‌ ಯುವಕರ ಈ ಕಾರ್ಯಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನಾವು ಮುಸ್ಲಿಮರು, ದೇವಸ್ಥಾನವನ್ನು ಸ್ವಚ್ಛಗೊಳಿಸಲು ಸಹಾಯ ಮಾಡಬಹುದೇ ಎಂದು ದೇಗುಲದ ಆಡಳಿತಾಧಿಕಾರಿಗಳಲ್ಲಿ ಕೇಳಿದೆವು, ಅವರು ಒಪ್ಪಿಗೆ ನೀಡಿದರು. ಯುದ್ಧ ಕಾಲ ಸೇರಿದಂತೆ ಪ್ರಾರ್ಥನಾ ಸ್ಥಳಗಳ ರಕ್ಷಣೆಗೆ ನೆರವಾಗುವುದು ಎಲ್ಲರ ಕರ್ತವ್ಯ ಎಂದು ಇಸ್ಲಾಂ ಹೇಳುತ್ತದೆ. ಈ ಪ್ರವಾಹವು ನಮ್ಮ ಪರೀಕ್ಷೆಯ ಕಾಲ ಎಂದು ತಂಡದಲ್ಲಿರುವ ಯುಎಇನಲ್ಲಿ ಎಂಜಿನಿಯರ್‌ ಆಗಿರುವ ಯುವಕ ನಜುಮುದ್ದೀನ್‌ ಹೇಳಿದ್ದಾರೆ.


ಮನ್ನಾರ್‌ಕಾಡ್‌ನಲ್ಲಿರುವ ಅಯ್ಯಪ್ಪ ದೇವಸ್ಥಾನವನ್ನು ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್‌ ಫೆಡರೇಷನ್‌ನ ಇಪ್ಪತ್ತು ಮುಸ್ಲಿಂ ಯುವಕರ ತಂಡವು ಸ್ವಚ್ಛಗೊಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ