'ಪುಸ್ತಕವನ್ನೆತ್ತಿಕೊಳ್ಳಿ, ಕಲ್ಲನ್ನಲ್ಲ', ಎಂದು ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಕರಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿರುವ ಸಿಂಗ್, 'ಪ್ರತಿಭಟನೆ, ಹಿಂಸೆಯನ್ನು ಕೈ ಬಿಡಿ, ಪುಸ್ತಕವನ್ನು ಎತ್ತಿಕೊಳ್ಳಿ', ಎಂದು ಕೇಳಿಕೊಂಡಿದ್ದಾರೆ.
ದಿನಾಂಕ ತೋರಿಸದ ವಿಡಿಯೋ ಸಿಂಗ್ ಲಕ್ನೋ ವಿಶ್ವವಿದ್ಯಾಲಯದಲ್ಲಿ ಆಡಿದ ಭಾಷಣವನ್ನು ಹೊಂದಿದೆ. ಅದರಲ್ಲಿ ಅವರು, 'ಸಂಪೂರ್ಣ ದೇಶದ ಜನರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಸಹೋದರರಂತೆ ನೋಡಿಕೊಳ್ಳಬೇಕು ಮತ್ತು ಅವರ ಭದ್ರತೆಯನ್ನು ಖಚಿತ ಪಡಿಸಬೇಕು' ಎಂದು ಹೇಳಿದ್ದಾರೆ.
'ಯುವ ಜನಾಂಗ ನಮ್ಮ ದೇಶದ ಭವಿಷ್ಯ. ಆದರೆ ಕಾಶ್ಮೀರದಲ್ಲಿ ಮಕ್ಕಳು ಮತ್ತು ಯುವಜನಾಂಗ ತಮ್ಮ ಕೈಯ್ಯಲ್ಲಿ ಕಲ್ಲನ್ನು ಎತ್ತಿಕೊಂಡಿದೆ ಎಂದು ಹೇಳುವುದಕ್ಕೆ ನನಗೆ ನೋವಾಗುತ್ತಿದೆ. ಅವರು ಕೈಯ್ಯಲ್ಲಿ ಕಲ್ಲುಗಳನ್ನೆತ್ತಿಕೊಳ್ಳಬಾರದು, ಪೆನ್, ಕಂಪ್ಯೂಟರ್, ಪುಸ್ತಕವನ್ನು ಹಿಡಿದುಕೊಳ್ಳಬೇಕು. ಕೆಲ ಜನರು ತನ್ನ ಅನುಪಯುಕ್ತ ಹಿತಾಸಕ್ತಿಗಾಗಿ ಮಕ್ಕಳಿಗೆ ಕಲ್ಲೆತ್ತಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಅವರ (ಮಕ್ಕಳ) ಭವಿಷ್ಯದ ಜತೆ ಆಟವಾಡಿದಂತಾಗುವುದಿಲ್ಲವೇ ಇದು? ತಮ್ಮ ಸ್ವಂತ ಮಕ್ಕಳಿಗೆ ಶಿಕ್ಷಣವನ್ನು ತ್ಯಜಿಸಿ ಕಲ್ಲೆತ್ತಿಕೊಳ್ಳುವಂತೆ ಅವರು ಹೇಳುತ್ತಾರೆಯೇ?', ಎಂದು ಪ್ರತ್ಯೇಕತಾವಾದಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.