ಲಖಿಂಪುರಕ್ಕೆ ತೆರಳುತ್ತಿದ್ದಂತ ಪ್ರಿಯಾಂಕಾ ಗಾಂಧಿ ಅರೆಸ್ಟ್

ಸೋಮವಾರ, 4 ಅಕ್ಟೋಬರ್ 2021 (10:43 IST)
ಮಧ್ಯಪ್ರದೇಶ : ಲಖಿಂಪುರದಲ್ಲಿ ಕೇಂದ್ರ ಸಚಿವರ ಪುತ್ರನ ಕಾರಿಗೆ ಬಲಿಯಾದಂತ ರೈತರ ಕುಟುಂಬಗಳನ್ನು ಭೇಟಿಯಾಗಿ, ಸಾಂತ್ವಾನ ಹೇಳೋದಕ್ಕೆ ತೆರಳುತ್ತಿದ್ದಂತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು, ಪೊಲೀಸರು ಹರ್ಗಾಂವ್ ನಲ್ಲಿ ಬಂಧಿಸಿದ್ದಾರೆ.

ಈ ಕುರಿತು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಬಿವಿ ಮಾಹಿತಿ ನೀಡಿದ್ದು, ಹಿಂಸಾಚಾರ ಪೀಡಿತ ಲಖಿಂಪುರಕ್ಕೆ ಹೋಗುತ್ತಿದ್ದಾಗ 'ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಹರ್ಗಾಂವ್ ನಿಂದ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಕ್ಷದ ಇತರ ನಾಯಕರು ಸೋಮವಾರ ಮುಂಜಾನೆ ಲಖಿಂಪುರ ಗಡಿಯನ್ನು ತಲುಪಿದರು. ಆದರೆ ರೈತರ ಪ್ರತಿಭಟನೆಯ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರದ ಬಲಿಪಶುಗಳನ್ನು ಭೇಟಿಯಾಗಲು ಅವರಿಗೆ ಅನುಮತಿ ನೀಡಲಾಗಿರಲಿಲ್ಲ.
ಪಕ್ಷದ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರೊಂದಿಗೆ ಇರುವ ಪ್ರಿಯಾಂಕಾ ಗಾಂಧಿ ಅವರು, ಹಿಂಸಾಚಾರಪೀಡಿತ ಪ್ರದೇಶವಾದ ಲಖಿಂಪುರದಲ್ಲಿ ಉದ್ವಿಗ್ನತೆಯ ನಡುವೆ ಮುಖ್ಯ ರಸ್ತೆಗಳಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಿದ್ದರಿಂದ, ಸೌತಾಪುರದ ಗಡಿಯಲ್ಲಿರುವ ಹರ್ಗಾಂವ್ ಪ್ರದೇಶವನ್ನು ತಲುಪಲು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಬೇಕಾಯಿತು.
ನಾವು ಲಖಿಂಪುರ್ ಖೇರಿಹೊರಗೆ ಕಾಯುತ್ತಿದ್ದೇವೆ. ಪೊಲೀಸರು ನಮ್ಮನ್ನು ಪ್ರವೇಶಿಸದಂತೆ ತಡೆದಿದ್ದಾರೆ. ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಧೀರಜ್ ಗುರ್ಜಾರ್ ಅವರು ಬೆಳಿಗ್ಗೆ 4.30ಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಇದರ ಮಧ್ಯೆ ಲಖಿಂಪುರ ಖೇರಿಗೆ ತೆರಳುತ್ತಿದ್ದಂತ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ