ಕರ್ನಾಟಕದ ಎರಡು ಕ್ಷೇತ್ರಗಳ ಗೆಲುವು ಮೋದಿಗೆ ಎಚ್ಚರಿಕೆಯ ಸಂದೇಶ:ಖರ್ಗೆ

ಮಂಗಳವಾರ, 19 ಅಕ್ಟೋಬರ್ 2021 (10:07 IST)
ವಿಜಯಪುರ : ಕರ್ನಾಟಕದ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಅ.30ರಂದು ಮತದಾನ ನಡೆಯಲಿದೆ. ಇದೊಂದು ಉಪಚುನಾವಣೆ ಎಂದು ಉದಾಸೀನ ಮಾಡಬೇಡಿ. ಇಲ್ಲಿ ಕಾಂಗ್ರೆಸ್ ಸಾಧಿಸುವ ಗೆಲುವಿನಿಂದ ನರೇಂದ್ರ ಮೋದಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತೆ ಆಗುತ್ತದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಜಿಲ್ಲೆಯ ಅಲಮೇಲ ಪಟ್ಟಣದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚಿಸಿ ಮಾತನಾಡಿದ ಅವರು, ಇಲ್ಲಿ ನಾವು ಸಾಧಿಸುವ ಗೆಲುವಿನಿಂದ ರೈತರು, ಬಡವರಿಗೆ ತೊಂದರೆ ನೀಡುತ್ತಿದ್ದಿರಿ ಎಂಬ ಎಚ್ಚರಿಕೆಯನ್ನು ಆಳುವವರಿಗೆ ನೀಡುತ್ತದೆ. ಬಿಜೆಪಿಯ ಮುಂಚೂಣಿ ನಾಯಕರು ನಿರುದ್ಯೋಗಿ ಯುವಕ, ಯುವತಿಯರನ್ನು ವಂಚಿಸುತ್ತಿದ್ದಾರೆ. ಹಿಂದೂ ಮುಸ್ಲಿಂ ಜಗಳ ತಂದಿಟ್ಟು ವಿಷಯಾಂತರ ಮಾಡುತ್ತಿದ್ದಾರೆ. ಕುತಂತ್ರದಿಂದ ಚುನಾವಣೆ ಗೆಲ್ಲಲು ಬಿಜೆಪಿ ಹಂಬಲಿಸುತ್ತಿದೆ ಎಂದು ವಿಶ್ಲೇಷಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ನಮ್ಮ ನಾಯಕರು ದೇಶಕ್ಕಾಗಿ ಜೈಲುವಾಸ ಅನುಭವಿಸಿದ್ದರು. ಸಂವಿಧಾನ ಬರೆವಂತೆ ಅಂಬೇಡ್ಕರ್ಗೆ ಗಾಂಧಿ ಒಪ್ಪಿಸಿದ್ದರು. ಎಲ್ಲಾ ತಾರತಮ್ಯ ತೊಡೆದುಹಾಕಿ ಸಮಾನತೆ ನೀಡಿದ್ದರು. ಅಂಬೇಡ್ಕರ್ ಬರೆದ ಸಂವಿಧಾನ ಎಲ್ಲರಿಗೂ ಅವಕಾಶ ನೀಡಿದೆ. ಕಾಲೇಜು, ರಸ್ತೆ, ಸೇತುವೆ, ಮತದಾನದ ಹಕ್ಕು ನೀಡಿದ್ದೇವೆ. ಆದರೆ ಆರ್ಎಸ್ಎಸ್ ಮಹಿಳಾ ಸಬಲೀಕರಣ ಮಾಡಲು ಮುಂದೆ ಬರುತ್ತಿಲ್ಲ ಎಂದು ಅವರು ನುಡಿದರು.
ಈ ಚುನಾವಣಾ ಮಹತ್ವದ್ದಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇದೇನು ಉಪ ಚುನಾವಣೆ ಎಂದು ಉದಾಸೀನ ಮಾಡಬೇಡಿ. ಕೇಂದ್ರ ಸಚಿವರ ಪುತ್ರ ಕಾರು ಹರಿಸಿ ರೈತರ ಹತ್ಯೆ ಮಾಡಿದ್ದಾನೆ. ಇದು ಕೊಲೆಗಡುಕ ಸರ್ಕಾರ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಪ್ರಕರಣವನ್ನೇ ದಾಖಲಿಸದೆ ಬಂಧಿಸಲಾಗಿದೆ. ಅವರನ್ನು ಉತ್ತರ ಪ್ರದೇಶ ಸರ್ಕಾರವು 72 ಗಂಟೆಗಳ ಬಂಧನದಲ್ಲಿ ಇರಿಸಿತ್ತು. ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದು ವಿಜಯಪುರ ಜಿಲ್ಲೆ ಆಲಮೇಲ ಪಟ್ಟಣದಲ್ಲಿ ಖರ್ಗೆ ಹೇಳಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ