ಮುದ್ರಣ ಮಾಧ್ಯಮದಿಂದ ಸಾಹಿತ್ಯದ ಕೊಲೆ: ದೇರ್ಲ ಆತಂಕ

ಶನಿವಾರ, 29 ನವೆಂಬರ್ 2008 (19:08 IST)
ಮಾಧ್ಯಮಗಳ ಮೌಲ್ಯ ಕಡಿಮೆಯಾಗುತ್ತಿದ್ದರೆ ಅದಕ್ಕೆ ಓದುಗರೇ ಕಾರಣ ಎಂದು ಅಭಿಪ್ರಾಯಪಟ್ಟ ಡಾ. ನರೇಂದ್ರ ರೈ ದೇರ್ಲ, ಮುದ್ರಣ ಮಾಧ್ಯಮವು ಸಾಹಿತ್ಯವನ್ನು ಕೊಲ್ಲುತ್ತಿದೆಯೇ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ನುಡಿಸಿರಿ ಸಮ್ಮೇಳನದಲ್ಲಿ ಶನಿವಾರ "ಮಾಧ್ಯಮದಲ್ಲಿ ಕನ್ನಡ: ಶಕ್ತಿ ಮತ್ತು ವ್ಯಾಪ್ತಿ" ಕುರಿತ ಮೂರನೇ ವಿಚಾರಗೋಷ್ಠಿಯಲ್ಲಿ ಮುದ್ರಣ ಮಾಧ್ಯಮ ಕುರಿತು ಮಾತನಾಡಿದ ಅವರು, ಪತ್ರಿಕೆಗಳು ಮೌಲ್ಯದ ಜತೆ ಪ್ರಸರಣಕ್ಕೆ ಹೆಚ್ಚಿನ ಒತ್ತು ನೀಡಿದ ಕಾರಣ ಕೆಲವೊಮ್ಮೆ ಮೌಲ್ಯ, ಗುಣಮಟ್ಟದ ಜತೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ನುಡಿದರು.

ನೆರೆಯ ಕೇರಳದಲ್ಲಿ ಪತ್ರಿಕೆ ಓದುವವರ ಪ್ರಮಾಣ ಹೆಚ್ಚಿರುವುದರಿಂದಾಗಿ ಅಲ್ಲಿ ಪ್ರಸಾರವೂ ಹೆಚ್ಚಿದೆ. ಆದರೆ ಕನ್ನಡಿಗರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಈ ಆಸಕ್ತಿ ಕುಸಿತ ವಿಷಾದಕರ ಸಂಗತಿ ಎಂದು ದೇರ್ಲ ನುಡಿದರು.

ಇದೇ ಗೋಷ್ಠಿಯಲ್ಲಿ ವಿದ್ಯುನ್ಮಾನ ಮಾಧ್ಯಮದ ಬಗ್ಗೆ ದೀಪಕ್ ತಿಮ್ಮಯ್ಯ ಮಾತನಾಡಿದರು. ಟಿವಿಗಳಲ್ಲಿ ಕಳಪೆ ಕಾರ್ಯಕ್ರಮ ಬರುತ್ತದೆ ಎಂದು ದೂರುವ ಜನರೇ ಅಂಥ ಕಾರ್ಯಕ್ರಮಗಳನ್ನು ಪದೇ ಪದೇ ನೋಡುವ ಕಾರಣ ಅವುಗಳ ಟಿಆರ್‌ಪಿ ಹೆಚ್ಚಳವಾಗಿ ಅಂಥ ಕಾರ್ಯಕ್ರಮಗಳೇ ಮುಂದುವರಿಯಲು ಕಾರಣವಾಗುತ್ತದೆ ಎಂದ ಅವರು, ಕಳಪೆ ಕಾರ್ಯಕ್ರಮಗಳನ್ನು ಜನರೇ ನಿರುತ್ತೇಜನಗೊಳಿಸಬೇಕಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ