75ರ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ: 2008ರಲ್ಲಿ ಗಣನೀಯ ವೃದ್ಧಿ

ರವಿಪ್ರಕಾಶ್ ರೈ
MOKSHENDRA
ಕನ್ನಡ ಚಿತ್ರರಂಗಕ್ಕೀಗ ಎಪ್ಪತ್ತೈದರ ಸಂಭ್ರಮ. ಅನೇಕ ಏಳು ಬೀಳುಗಳನ್ನು ಎದುರಿಸಿ, ಪರಭಾಷಾ ಚಿತ್ರಗಳ ಸ್ಪರ್ಧೆಯ ನಡುವೆಯೂ ಇತರ ಚಿತ್ರರಂಗ ಗುರುತಿಸುವ ರೀತಿಯಲ್ಲಿ ಬೆಳೆದಿದೆ. ಕೆಲವೇ ಕೆಲವು ನಟರು ವರ್ಷಾನುಗಟ್ಟಲೆ ಚಾಲ್ತಿಯಲ್ಲಿರುವ ಪದ್ಧತಿಯೂ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರೇಕ್ಷಕರ ಮನಸ್ಥಿತಿಯೂ ಬದಲಾಗಿದೆ. ಪ್ರೇಕ್ಷಕ ಈಗ ಬರೀ ನಾಯಕನನ್ನು ಆರಾಧಿಸುವುದಿಲ್ಲ. ಬದಲಾಗಿ ಉತ್ತಮ ಚಿತ್ರಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾನೆ. ತನ್ನ ನೆಚ್ಚಿನ ನಟನೇ ಆಗಿರಬಹುದು. ಆತನ ಚಿತ್ರ ಚೆನ್ನಾಗಿಲ್ಲವೆಂದರೆ ಪ್ರೇಕ್ಷಕನ ನಿಯತ್ತು ಬದಲಾಗುತ್ತದೆ. ಹಿಂದಿನಂತೆ ಒಬ್ಬ ನಟನಿಗೆ ನಿಯತ್ತಾಗಿರುವ ಪ್ರೇಕ್ಷಕ ಕಡಿಮೆಯಾಗಿದ್ದಾನೆ. ಒಂದು ಲೆಕ್ಕದಲ್ಲಿ ಇದು ಉತ್ತಮ ಬೆಳವಣಿಗೆ. ಇದರಿಂದ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ.

2008 ವರ್ಷ ಕನ್ನಡ ಚಿತ್ರರಂಗಕ್ಕೆ ಸಂಭ್ರಮದ ವರ್ಷ ಎಂದರೆ ತಪ್ಪಾಗದು. ಅತಿ ಹೆಚ್ಚು ಚಿತ್ರ ಬಿಡುಗಡೆಯಾಗುವುದರೊಂದಿಗೆ ಅನೇಕ ಹೊಸ ಮುಖಗಳು ಕೂಡಾ ಬೆಳಕಿಗೆ ಬಂದಿದ್ದು, ಇದೇ ವರ್ಷದಲ್ಲಿ. ಇಲ್ಲಿಯವರೆಗೆ ಸುಮಾರು 120 ಕನ್ನಡದಲ್ಲಿ ಚಿತ್ರಗಳು ಬಿಡುಗಡೆಯಾಗಿವೆ. ಇನ್ನಷ್ಟು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಇವುಗಳಲ್ಲಿ ಹೊಸ ಹೊಸ ಪ್ರತಿಭೆಗಳದ್ದೆ ಕಾರುಬಾರು. ಹಾಗಾಂತ ಬಿಡುಗಡೆಯಾದ ಚಿತ್ರಗಳು ಹಿಟ್ ಆಗಿವೆ ಎನ್ನುವಂತಿಲ್ಲ. ಇದರಲ್ಲಿ ಹೆಚ್ಚಿನ ಚಿತ್ರಗಳು ಎಡ್ರಸ್ ಇಲ್ಲದೇ ಹೋಗಿವೆ. ಇನ್ನೂ ಕೆಲವು ಕುಂಟುತ್ತಾ 50 ದಿನ ಪೂರೈಸಿವೆ. ಆದರೆ, ಇವೆಲ್ಲ ಉತ್ತಮ ಚಿತ್ರ ಎನ್ನುವಂತಿಲ್ಲ.
MOKSHENDRA


ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಚಿತ್ರಗಳು ಬರಲು ಅದರಲ್ಲೂ ಹೊಸಬರ ಚಿತ್ರಗಳೇ ಹೆಚ್ಚು ಬರಲು ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್ ಆಫೀಸನ್ನೂ ಕೊಳ್ಳೆ ಹೊಡೆದ 'ಮುಂಗಾರು ಮಳೆ', 'ದುನಿಯಾ' ಹಾಗೂ 'ಆ ದಿನಗಳು' ಚಿತ್ರಗಳು ಪ್ರೇರಣೆಯಾಗಿವೆ ಎಂದರೆ ತಪ್ಪಲ್ಲ. ಟಿವಿ ನಿರೂಪಕನಾಗಿದ್ದ ಗಣೇಶ್ ನಟಿಸಿದ ಸಣ್ಣ ಬಜೆಟ್ನಲ್ಲಿ ನಿರ್ಮಾಣವಾದ 'ಮುಂಗಾರು ಮಳೆ' ಚಿತ್ರ ಆ ಪರಿ ಹಿಟ್ ಆಗುತ್ತದೆಂದು ಸ್ವತಃ ನಿರ್ದೇಶಕ ಯೋಗರಾಜ್ ಭಟ್‌ರಿಗೂ ಗೊತ್ತಿರಲಿಲ್ಲ. ಆದರೆ ಈ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಣೇಶ್ ಗೋಲ್ಡನ್ ಸ್ಟಾರ್ ಎಂಬ ಬಿರುದು ಪಡೆಯುವುದರೊಂದಿಗೆ ರಾತ್ರೋರಾತ್ರಿ ಕೋಟಿ ವೀರರಾದರು. ಆ ನಂತರ ಏನಾಯಿತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅದೇ ರೀತಿ ದುನಿಯಾ ಹಾಗೂ ಆ ದಿನಗಳು ಕೂಡಾ ಅಷ್ಟೇ. ಚಿತ್ರಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಹಾಗೂ ಏಕಾಏಕಿ ಅಮೆರಿಕಾದಿಂದ ಹಾರಿ ಬಂದು ಆ ದಿನಗಳು ಚಿತ್ರದಲ್ಲಿ ನಟಿಸಿದ ಚೇತನ್ ಚಿತ್ರಗಳು ಭರ್ಜರಿ ಹಿಟ್ ಆಗುವುದರೊಂದಿಗೆ 2008 ರಲ್ಲಿ ಹೊಸ ಹೊಸ ನಿರ್ಮಾಪಕರು ಚಿತ್ರ ನಿರ್ಮಿಸಲು ಆಸಕ್ತಿ ತೋರಿದರು. ಆದರೆ ಇವರೆಲ್ಲಾ ತಮ್ಮ ಸಂಬಂಧಿಕರನ್ನೋ ಅಥವಾ ಮಗನನ್ನೋ ಹೀರೋ ಆಗಿಸಿ ಚಿತ್ರ ತೆಗೆದರು. ಆದರೆ ಇವರ್ಯಾರು ಕಥೆ ಬಗ್ಗೆ ಗಮನ ಕೊಡಲಿಲ್ಲ. ಬದಲಾಗಿ ತಾನೊಬ್ಬ ನಿರ್ಮಾಪಕನಾಗಬೇಕು ಅಥವಾ ನಿರ್ದೇಶಕನಾಗಬೇಕೆಂಬ ಆಸೆ ಹೊತ್ತು ಚಿತ್ರ ನಿರ್ಮಿಸಿದರು. ಪ್ರೇಕ್ಷಕ ಮಾತ್ರ ತುಂಬಾ ಬುದ್ಧಿವಂತ. ಇಂತಹ ಯಾವುದೇ ಡಬ್ಬಾ ಚಿತ್ರಗಳನ್ನು ಕೈ ಹಿಡಿಯಲಿಲ್ಲ. ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿದರು.

MOKSHENDRA
2008ರಲ್ಲಿ ಬಂದ ಹೆಚ್ಚಿನ ಚಿತ್ರಗಳಲ್ಲಿ ಹೊಸಬರೇ ನಾಯಕ-ನಾಯಕಿಯಾಗಿದ್ದರು. ಆದರೆ ಇವರ್ಯಾರು ಶಾಸ್ತ್ರೋಕ್ತವಾಗಿ ಅಭಿನಯ ಕಲಿತು ಬಂದವರಲ್ಲ. ನಿರ್ದೇಶಕರ ವಿಷಯಕ್ಕೆ ಬಂದರೂ ಅಷ್ಟೇ, ಹೆಚ್ಚಿನವರು ಹೊಸಬರೇ. ಒಂದೆರಡು ವರ್ಷ ಸಹಾಯಕ ನಿರ್ದೇಶಕರಾಗಿ ಅಲ್ಪಸ್ವಲ್ಪ ಅನುಭವ ಪಡೆದು ನಿರ್ದೇಶಕರಾದವರು. ಇದರಿಂದ ಹೆಚ್ಚಿನ ಹೊಸ ಚಿತ್ರಗಳು ಮಕಾಡೆ ಮಲಗಿವೆ.

2008ರಲ್ಲಿ ಬಿಡುಗಡೆಯಾದ ದೊಡ್ಡ ನಿರ್ದೇಶಕರ ಹಾಗೂ ನಟರ ಚಿತ್ರಗಳನ್ನು ಕೂಡಾ ಪ್ರೇಕ್ಷಕ ತಿರಸ್ಕರಿಸಿದ್ದಾನೆ. ಉದಾಹರಣೆಗೆ ದುನಿಯಾ ಚಿತ್ರದ ನಿರ್ದೇಶಕ ಸೂರಿ ನಿರ್ದೇಶಿಸಿದ 'ಇಂತಿ ನಿನ್ನ ಪ್ರೀತಿಯ' ಚಿತ್ರವನ್ನು ಸಾರಸಗಟಾಗಿ ಪ್ರೇಕ್ಷಕರು ತಿರಸ್ಕರಿಸಿದರು. ಸೂರಿ ಇಲ್ಲಿ ಚಿತ್ರದೊಳಗೆ ಇಡೀ ಬಾರನ್ನೇ ಎಳೆದು ತಂದಿದ್ದರು. ಇದು ಪ್ರೇಕ್ಷಕನಿಗೆ ಇಷ್ಟವಾಗಲಿಲ್ಲ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ, ರಾಕ್ಲೈನ್ ವೆಂಕಟೇಶ್ ನಿರ್ಮಾಣದ 'ಬೊಂಬಾಟ್', ದರ್ಶನ್ ನಾಯಕರಾಗಿದ್ದ ಅರ್ಜುನ, ಇಂದ್ರ ಶಿವರಾಜ್ಕುಮಾರ್ ನಾಯಕರಾಗಿದ್ದ ಮಾದೇಶ ಚಿತ್ರಗಳು ವಾರದೊಳಗೆ ಚಿತ್ರಮಂದಿರದಿಂದ ಎತ್ತಂಗಡಿಯಾದವು. ಜನಾರ್ದನ ಮಹರ್ಷಿಯಿಂದ ಕಥೆ ಪಡೆದು ಬೇರೆ ಬೇರೆ ಭಾಷೆಗಳ ದೃಶ್ಯಗಳನ್ನು ಯಥಾವತ್ತಾಗಿ ನಿರ್ದೇಶಕ ಡಿ. ರಾಜೇಂದ್ರ ಬಾಬು ಬೊಂಬಾಟ್‌ನಲ್ಲಿ ಭಟ್ಟಿ ಇಳಿಸಿದ್ದರು. ಜೊತೆಗೆ ಗಣೇಶ್‌ರಿಂದ ಭರ್ಜರಿ ಫೈಟ್ ಮಾಡಿಸುವ ದುಸ್ಸಾಹಸಕ್ಕೂ ಕೈ ಹಾಕಿದರು. ಪ್ರೇಕ್ಷಕ ಇದನ್ನು ತಿರಸ್ಕರಿಸಿದ.

MOKSHENDRA
ಗಾಳಿಪಟ, ಬುದ್ಧಿವಂತ, ನಂದ ಲವ್ಸ್ ನಂದಿತಾ, ತಾಜ್ಮಹಲ್, ಮೊಗ್ಗಿನ ಮನಸು, ಸತ್ಯ ಇನ್ ಲವ್, ಮುಸ್ಸಂಜೆ ಮಾತು ಹೀಗೆ ಕೆಲವು ಚಿತ್ರಗಳು 2008 ರಲ್ಲಿ ಹಿಟ್ ಆಗಿ ಶತದಿನ ಆಚರಿಸಿವೆ. ಉಳಿದಂತೆ ಹೆಚ್ಚಿನ ಚಿತ್ರಗಳು ಕುಂಟುತ್ತಾ 50 ದಿನ ಪೂರೈಸಿವೆ. ಚೆಲುವಿನ ಚಿತ್ತಾರದ ಯಶಸ್ಸಿನ ನಂತರ ಎಸ್.ನಾರಾಯಣ್ ಅಮೂಲ್ಯಳ ಡಿಮ್ಯಾಂಡನ್ನು ಎನ್ಕ್ಯಾಶ್ ಮಾಡುವ ಪ್ರಯತ್ನವಾಗಿ ತಮ್ಮ ಮಗ ನಾಯಕನಾಗಿದ್ದ 'ಚೈತ್ರದ ಚಂದ್ರಮ' ತೆಗೆದರು. ಪ್ರೇಕ್ಷಕ ಇದನ್ನು ಜಾಡಿಸಿದ.

2008ರಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಜಯಮಾಲಾ ಆಯ್ಕೆಯಾದರು. ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ ಎಂಬುದು ಗಮನಾರ್ಹ ಅಂಶ. ಒಂದು ರೀತಿಯಲ್ಲಿ 2008 ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕೆ ಮುನ್ನಡಿ ಹಾಡಿದ ವರ್ಷ ಎಂದರೆ ತಪ್ಪಾಗಲಾರದು. ತಂತ್ರಜ್ಞಾನದ ಜೊತೆಗೆ ಹೊಸ ಥರದ ಕತೆಗಳು ಬರಲಾರಂಭಿಸಿದ್ದೂ ಇತ್ತೀಚಿನ ಆಹ್ಲಾದಕರ ಬೆಳವಣಿಗೆ. ಪ್ರೇಕ್ಷಕರು ಒಂದೇ ಥರದ ಕಥೆಗಳನ್ನು ಇಷ್ಟಪಡಲ್ಲ ಎಂದು ತಿಳಿದ ನಿರ್ದೇಶಕರು ಸ್ವಲ್ಪ ವಿಶಿಷ್ಟವಾದ ಕಥೆಗಳೊಂದಿಗೆ ಚಿತ್ರ ಮಾಡಲು ಮುಂದಾದರು.
MOKSHENDRA


ಮುಂಗಾರು ಮಳೆಯ ನಂತರ ಕನ್ನಡ ಚಿತ್ರರಂಗದಲ್ಲಿ ಅತ್ಯಾಧುನಿಕ ಎನ್ನುವಂತಹ ತಂತ್ರಜ್ಞಾನವನ್ನು ಬಳಸುವ ರೂಢಿ ಹೆಚ್ಚಾಯಿತು ಎಂದರೆ ತಪ್ಪಲ್ಲ. ಪರಭಾಷಾ ಚಿತ್ರಗಳ ದೃಶ್ಯಗಳನ್ನು ಕಂಡು ಬಾಯ್ತುಂಬ ಹೊಗಳುತ್ತಿದ್ದ ಪ್ರೇಕ್ಷಕ ಈಗ ಕನ್ನಡದಲ್ಲೂ ಅಂತಹ ಚಿತ್ರಗಳನ್ನು ನೋಡುವಂತಾಗಿದೆ. ಹಾಡುಗಳ ಚಿತ್ರೀಕರಣ, ದೃಶ್ಯ ಸಂಯೋಜನೆ, ಹಿನ್ನೆಲೆ ಸಂಗೀತ, ಸಂಕಲನ, ಸ್ಪೆಷಲ್ ಎಫೆಕ್ಟ್, ಡಿಟಿಎಸ್, ಡಿಜಿಟಲ್ ಇಂಟರ್ ಮೀಡಿಯೇಟ್ ಹಾಗೂ ಅತ್ಯಾಧುನಿಕ ಕ್ಯಾಮರಾಗಳನ್ನು ಬಳಸುವ ಟ್ರೆಂಡ್ ಕನ್ನಡದಲ್ಲೂ ಹೆಚ್ಚಾಗಿದೆ. 'ಇಂತಿ ನಿನ್ನ ಪ್ರೀತಿಯ', 'ಗಜ', 'ಸೈಕೋ', 'ಮಿಲನ' ಚಿತ್ರಗಳು ವಿಶಿಷ್ಟ ತಂತ್ರಜ್ಞಾನ ಬಳಕೆಗೆ ಕೆಲವು ಉದಾಹರಣೆಗಳು.

MOKSHENDRA
ಕನ್ನಡ ಚಿತ್ರರಂಗದಲ್ಲಿ ಚಿತ್ರ ಸಾಹಿತಿಗಳಿಗೆ ಈ ವರ್ಷ ಹೆಚ್ಚು ಬೇಡಿಕೆ ಬಂದಿದೆ. ಮುಂಗಾರು ಮಳೆಗೆ ಹಿಟ್ ಹಾಡು ಬರೆದ ಜಯಂತ್ ಕಾಯ್ಕಿಣಿ ಚಿತ್ರ ಸಾಹಿತಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕವಿರಾಜ್ ಕೂಡಾ ಸದ್ಯ ಬೇಡಿಕೆಯಲ್ಲಿರುವರು. ಕನ್ನಡ ಚಿತ್ರಗಳಲ್ಲಿ ಈಗ ಹಾಡುಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಚಿತ್ರದ ಹಾಡು ಹಿಟ್ ಆದರೆ ಚಿತ್ರ ಹಿಟ್ ಆದಂತೆ ಎಂಬ ಭಾವನೆ ಗಾಂಧಿನಗರದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ.

ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಉತ್ತಮವಾಗಿಯೇ ನಡೆದಿದೆ ಎನ್ನುವಂತಿಲ್ಲ. ಅನೇಕ ಮುನಿಸು, ಸಣ್ಣ ಪುಟ್ಟ ಪ್ರತಿಭಟನೆಗಳು ನಡೆದಿವೆ. ಕನ್ನಡದಲ್ಲಿ ಸೋನು ನಿಗಮ್, ಶಂಕರ್ ಮಹದೇವನ್ ಸೇರಿದಂತೆ ಪರಭಾಷಾ ಗಾಯಕರಿಗೆ ಬೇಡಿಕೆ ಹೆಚ್ಚಿದ್ದರಿಂದ ಕನ್ನಡದ ಗಾಯಕರಿಗೆ ಕೆಲಸ ಕಡಿಮೆಯಾಗಿದೆ. ಇದರಿಂದ ಅವರು ಸಿಟ್ಟಾಗಿ ಪ್ರತಿಭಟನೆಗೂ ಇಳಿದಿದ್ದಾರೆ. ಇದರಲ್ಲಿ ಗಾಯಕ ರಾಜೇಶ್ ಕೃಷ್ಣನ್ ತಮ್ಮ ಸಿಟ್ಟನ್ನು ಸ್ವಲ್ಪ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಆಡಿಯೋ ಕಂಪೆನಿಗಳು ಕೂಡಾ ಕನ್ನಡ ಗಾಯಕರು ಹಾಡಿದ್ದರೆ ಆ ಧ್ವನಿ ಸುರುಳಿಯ ಹಕ್ಕು ಪಡೆಯಲು ಹಿಂದೇಟು ಹಾಕುತ್ತಾರೆ.

ಪರಭಾಷಾ ನಟಿಯರ ಬಗ್ಗೆ ಅಸಮಾಧಾನ:
MOKSHENDRA

ಮತ್ತೊಂದೆಡೆ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆ ತರುವುದರಿಂದ ಕನ್ನಡದ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ ಎಂಬ ಕೂಗು ಬಹು ಕಾಲದಿಂದಲೂ ಕೇಳಿ ಬರುತಿತ್ತು. ಆದರೆ 2008 ನೇ ವರ್ಷದಲ್ಲಿ ಇದು ಹೆಚ್ಚಾಗಿ ಕಂಡು ಬಂದಿದೆ. ಈ ವರ್ಷ ಬಿಡುಗಡೆಯಾದ ದೊಡ್ಡ ಸ್ಟಾರ್‌ಗಳ ಚಿತ್ರಗಳ ನಾಯಕಿಯರೆಲ್ಲ ಬೇರೆ ಭಾಷೆಯವರು. ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್, ದರ್ಶನ್ ಹೀಗೆ ದೊಡ್ಡ ನಟರ ಚಿತ್ರಗಳಿಗೆ ಬಾಲಿವುಡ್ ಅಥವಾ ಟಾಲಿವುಡ್ನಿಂದ ನಾಯಕಿಯರನ್ನು ಕರೆತರುತ್ತಿರುವುದು ಇಲ್ಲಿನ ನಾಯಕಿಯರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತೀಚೆಗೆ ತೆರೆಕಂಡ ಉಪೇಂದ್ರ ಅಭಿನಯದ ಬುದ್ಧಿವಂತ ಚಿತ್ರದಲ್ಲಿನ ಐದು ನಾಯಕಿಯರು ಕೂಡಾ ಪರಭಾಷಿಗರು. ಅಂತೆಯೇ ಸಂಗಮ, ರಾಜ್ ದಿ ಶೊ ಮ್ಯಾನ್, ಸರ್ಕಸ್, ಪರಮೇಶಿ ಪಾನ್ವಾಲಾ, ಮಳೆಯೂ ಬರಲಿ ಮಂಜು ಇರಲಿ, ಅರ್ಜುನ, ವಂಶಿ, ಹೊಡಿಮಗ, ಚೆಲುವೆಯೇ ನಿನ್ನ ನೋಡಲು, ಹೀಗೆ ಅನೇಕ ಚಿತ್ರಗಳಲ್ಲಿನ ನಾಯಕಿಯರೆಲ್ಲ ಬೇರೆ ಭಾಷಿಗರು. ಇದೇ ರೀತಿ ಟ್ರೆಂಡ್ ಮುಂದುವರಿದರೆ ನಾವು ಕೂಡಾ ಪರಭಾಷಾ ಚಿತ್ರಗಳತ್ತ ಹೆಚ್ಚು ಒಲವು ತೋರಿಸಬೇಕಾಗುತ್ತದೆ ಎಂದು ನಟಿ ನೀತು ಹಾಗೂ ಹರಿಪ್ರಿಯಾ ತಮ್ಮ ಅಸಮಾಧಾನವನ್ನು ಸಣ್ಣಗೆ ಹೊರ ಹಾಕಿದ್ದಾರೆ. ಕನ್ನಡದಲ್ಲಿ ರಮ್ಯಾ ಬಿಟ್ಟರೆ ಸೂಕ್ತ ನಾಯಕಿಯರಿಲ್ಲ ಎಂಬುದು ನಿರ್ಮಾಪಕರ ವಾದ. ಆದರೆ ಇದ್ದ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಕನ್ನಡದಲ್ಲಿ ಆಗುತ್ತಿಲ್ಲ.

ಪೈರಸಿ ಹಾವಳಿ:
MOKSHENDRA
ಕನ್ನಡ ಚಿತ್ರರಂಗ ಎದುರಿಸುತ್ತಿರುವ ಮುಖ್ಯ ಸಮಸ್ಯೆ ಎಂದರೆ ಪೈರಸಿ ಹಾವಳಿ. ಹಿಂದಿನಿಂದಲೂ ಈ ಸಮಸ್ಯೆ ಕಾಡುತ್ತಿದ್ದರೂ ಈ ವರ್ಷ ಇದರ ವಿರುದ್ದ ಚಿತ್ರ ಮಂದಿ ಹೆಚ್ಚು ಹೋರಾಟ ನಡೆಸಿದ್ದಾರೆ. ನೆಲಮಂಗಲ ಬಳಿ ನಕಲಿ ಸಿಡಿ ಮಾರಾಟ ಮಾಡುತ್ತಿದ್ದಾತನನ್ನು ಪತ್ತೆ ಹಚ್ಚಿದ ನಿರ್ಮಾಪಕ ಕೆ.ಮಂಜು ಆತನನ್ನು ಮಾಧ್ಯಮದ ಮುಂದೆ ತಂದು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪೈರಸಿ ಹಾವಳಿಯಿಂದ ಬಿಡುಗಡೆಯಾದ ಮರುದಿನ ಆ ಚಿತ್ರದ ಸಿಡಿ ರಸ್ತೆ ಬದಿಯಲ್ಲಿ ಬಿಕರಿಯಾಗುತ್ತಿರುತ್ತವೆ. ಇದರ ವಿರುದ್ಧ ಗೂಂಡಾ ಕಾಯ್ದೆ ತರುವಂತೆ ಅದ್ಯಕ್ಷೆ ಜಯಮಾಲಾ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಒತ್ತಾಯಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಗೆ ತುಮಕೂರು ವಿವಿಯಿಂದ ಡಾಕ್ಟರ್ ಘೋಷಣೆಯಾದುದು ಕೂಡಾ 2008 ರಲ್ಲೇ. ಅವರ ಅಭಿನಯವನ್ನು ಪರಿಗಣಿಸಿ ಈ ಪದವಿ ನೀಡಲಾಗಿದೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಒಟ್ಟು ಏಳು ಮಂದಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
MOKSHENDRA


ಕನ್ನಡ ಚಿತ್ರರಂಗ ಎಷ್ಟೇ ಮುಂದುವರಿದರೂ ಕೆಲವು ಸಮಸ್ಯೆಗಳು ಇದನ್ನು ಬೆಂಬಿಡದೆ ಕಾಡುತ್ತಿವೆ. ಕನ್ನಡದಲ್ಲಿ ಒಂದು ಚಿತ್ರನಗರಿ ನಿರ್ಮಾಣವಾಗಬೇಕೆಂದು ರವಿಚಂದ್ರನ್ ಸೇರಿದಂತೆ ಅನೇಕರ ಕನಸು. ರಾಮೋಜಿ ರಾವ್ ಸ್ಟುಡಿಯೊ ಥರನೇ ಇಲ್ಲೂ ಒಂದು ಸ್ಟುಡಿಯೋ ನಿರ್ಮಾಣವಾಗಬೇಕು. ಈಗಿರುವ ಕೆಲವು ಸ್ಟುಡಿಯೋಗಳನ್ನು ಕಿರುತೆರೆಗಳು ಆಕ್ರಮಿಸಿಕೊಂಡಿವೆ. ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ. ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಮೊದಲ ಪ್ರಾಶಸ್ತ್ಯ ನೀಡುವಂತಹ ನೀತಿ ಅಳವಡಿಸಬೇಕು. ಇವೆಲ್ಲವೂ ಜಾರಿಯಾದರೆ ಕನ್ನಡ ಚಿತ್ರರಂಗದ ಮೆರುಗೇ ಬೇರೆ. ಆದರೆ ಸರ್ಕಾರ ಹಾಗೂ ಉದ್ಯಮದ ಮಂದಿ ಇದರತ್ತ ಆಸಕ್ತಿ ವಹಿಸಬೇಕು.

ಏನೇ ಆದರೂ ಕನ್ನಡ ಚಿತ್ರರಂಗ ವರ್ಷದಿಂದ ವರ್ಷಕ್ಕೆ ಏಳಿಗೆ ಕಾಣುತ್ತಿದೆ ಎನ್ನುವುದೇ ಸಂತೋಷದ ಅಂಶ.