ಎಲ್ಲರೆದೆಯೊಳು ಸ್ಫುರಿಸೋ ಪ್ರೀತಿಗೊಂದು ಎಲ್ಲೆ ಎಲ್ಲಿದೆ...?

ಚಂದ್ರಾವತಿ ಬಡ್ಡಡ್ಕ

ಬುದ್ಧಿಯ ಪ್ರಶ್ನೆ
ನಿಂಗೇನು
ಹದಿನೆಂಟೇ?
ಭಾವದ ತರ್ಕ
ಪ್ರೀತಿಗೆ
ವಯಸ್ಸುಂಟೇ?

ಇದು ನಾನೇ ಯಾವಾಗಲೋ ಬರೆದದ್ದು.

WD
ಪ್ರೀತಿ ಮೂಡುವ ಹೊತ್ತು, ಅಲ್ಲಿ ಭಾವನೆಗಳದ್ದೇ ಗತ್ತು. ಯಾರಿಗಾದರೂ ಗೊತ್ತಾ? ಇದು ಯಾವಾಗ, ಯಾರೊಳಗೆ, ಎಲ್ಲಿ ಹುಟ್ಟುತ್ತೆ? ಜೀವನದಲ್ಲಿ ಒಮ್ಮೆಯಾದರೂ ಮನದೊಳಗೆ ಹರ್ಷದ ಚಿಲುಮೆಯುಕ್ಕಿಸುವ ಒಂದು ಸುಮಧುರ ಅನುಭೂತಿಯ ಆವಾಹನೆಗೆ ಒಳಗಾಗದವರೂ ಯಾರಾದರೂ ಇದ್ದಾರೆಯೆ? ಅದು ವ್ಯಕ್ತವಾಗಿರಬಹುದು ಇಲ್ಲ ಅವ್ಯಕ್ತವಾಗಿರಬಹುದು.

ಈ ಪ್ರೀತಿಯ ಶಕ್ತಿಯಾದರೂ ಎಂಥದ್ದು. ಮನ-ಮನಗಳನ್ನು ಹುರುಪಿನಿಂದ ಹುರಿಗೊಳಿಸುವ, ಹರಿತಗೊಳಿಸುವ ಶಕ್ತಿ ಅದಕ್ಕಿದೆ. ಮನದಲ್ಲಿ ಮೊಳಕೆಯೊಡದ ಪ್ರೀತಿ ಮನದೊಡೆಯ ಇಲ್ಲಾ ಮನದೊಡತಿಗೆ ಅಗಾಧ ಶಕ್ತಿಯನ್ನು ತುಂಬುತ್ತದೆ. ಸಾಹಸಕ್ಕೇ ಪ್ರೇರಣೆ ನೀಡುತ್ತದೆ. ಪ್ರೀತಿಗಾಗಿ ರಾಜ್ಯ ಕಟ್ಟಿದವರಿದ್ದಾರೆ, ಕಳಕೊಂಡವರಿದ್ದಾರೆ. ಯುದ್ಧಗಳು ನಡೆದುಹೋಗಿವೆ. ಪುರಾಣಗಳು ಸೃಷ್ಟಿಯಾಗಿವೆ.....

ಆರಂಭದಲ್ಲೇ ಹೇಳಿರುವಂತೆ, ಪ್ರೀತಿಗೆ ಯಾವ ಹಂಗೂ ಇಲ್ಲ (ಪ್ರೀತಿಸಿದವರಿಗೆ ಇರಬಹುದು). ಜಾತಿ, ಧರ್ಮ, ಪ್ರಾಂತ, ಬಣ್ಣವನ್ನು ಮೀರಿ ನಿಂತ ಆಕಾರವಿಲ್ಲದ, ಬಣ್ಣವಿಲ್ಲದ, ಕಣ್ಣಿಗೆ ಕಾಣದ, ಹೃದಯವನ್ನು ತಟ್ಟುವ, ಕಲಕುವ, ಮೀಟುವ, ಕಾಡುವ ಅದೊಂದು ಭಾವ ಮಾತ್ರ. ಈ ಪ್ರೀತಿ ಬರಿಯ ಹದಿಹರೆಯದವರನ್ನು ಮಾತ್ರ ಕಾಡುವುದಲ್ಲ; ಅದು ಮುದಿ ಹರೆಯದವರನ್ನೂ ಬಿಟ್ಟಿಲ್ಲ!

ಅಹಿಂಸಾ ತತ್ವವನ್ನೇ ಅನುಸರಿಸಿ, ಈ ಮೂಲಕ ಹೋರಾಟ ಸಾಧ್ಯ ಎಂಬುದನ್ನು ಜಗತ್ತಿಗೆ ಬೋಧಿಸಿದವರು ಗಾಂಧೀಜಿ. ಸುದೀರ್ಘ ಕಾಲದ ಹೋರಾಟ ವ್ಯೂಹ, ಕಾರ್ಯತಂತ್ರಗಳನ್ನು ರೂಪಿಸಿದವರು, ಅಸಂಖ್ಯ ಅನುಯಾಯಿಗಳನ್ನು ತನ್ನ ನಡೆ-ನುಡಿ, ಜೀವನ ಶೈಲಿಯ ಮಾದರಿಯ ಮೂಲಕವೇ ಸೆಳೆದ ಗಾಂಧೀಜಿಯವರೂ ಸಹ ಪ್ರೀತಿಯ ಮಾಯೆಗೆ ಶರಣಾದವರು.

ಅವರ ಕುಟುಂಬದ ಸದಸ್ಯರಿಗೆ ಮುಜುಗರವಾಗಿರುವಂತಹ ಪ್ರೇಮ ಸಂಬಂಧವೊಂದನ್ನು ಅವರು ಹೊಂದಿದ್ದರು ಎಂಬುದಾಗಿ ಅವರ ಮಗನ ಮಗ ಅಂದರೆ ಮೊಮ್ಮಗ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. 'ಮೋಹನ್ ದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್' ಎಂಬ ಪುಸ್ತಕದಲ್ಲಿ ಅವರು ಈ ಆಸಕ್ತಿಯ, ಕುತೂಹಲದ ಅಂಶವನ್ನು ತೆರೆದಿರಿಸಿದ್ದಾರೆ.

ತನ್ನ ಆದರ್ಶದಿಂದಲೇ ಮಹಾತ್ಮರಾಗಿರುವ ಮೋಹನ್ ದಾಸ್ ಕರಮಚಂದ ಗಾಂಧೀಜಿಯವರು ತಮ್ಮ 50ರ ಹರೆಯದಲ್ಲಿ ಸರಳಾ ದೇವಿ ಎಂಬವರಿಗೆ ಮನಸೋತಿದ್ದರು ಎಂಬುದಾಗಿ ಈ ಪುಸ್ತಕ ಹೇಳುತ್ತದೆ. ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಠಾಗೋರ್ ಅವರ ಸಹೋದರಿಯ ಮಗಳಾಗಿರುವ ಸರಳಾ ದೇವಿ, ಆಗ 29ರ ಹರೆಯದವರಾಗಿದ್ದರಂತೆ. ಲಾಹೋರಿನಲ್ಲಿ ಪತ್ರಿಕೆಯೊಂದರ ಸಂಪಾದಕರಾಗಿದ್ದ ರಾಮ್ ಭುಜ್ ದತ್ ಎಂಬವರನ್ನು ವಿವಾಹವಾಗಿದ್ದ ಸರಳಾ ಅದ್ಭುತ ಪ್ರತಿಭೆಯ ಕವಯತ್ರಿಯಾಗಿದ್ದರು. ತನ್ನ ಎಡೆಬಿಡದ ಕಾರ್ಯಕ್ರಮಗಳ ನಡುವೆಯೂ ಅವರು, ತನ್ನ 'ಪ್ರೀತಿ'ಯನ್ನು ಕಾಣಲು ಪದೇಪದೇ ಲಾಹೋರಿಗೆ ಭೇಟಿ ನೀಡುತ್ತಿದ್ದರು. ಮತ್ತು ಗಾಂಧೀಜಿಯವರ ದಿನಚರಿ ಪುಸ್ತಕದಲ್ಲಿ ಸರಳಾ ದೇವಿಯ ಕುರಿತ ಮೆಚ್ಚುಗೆಯ ಸಾಲುಗಳು ಮೂಡಿಬಂದಿದ್ದವು.

ರಾಷ್ಟ್ರವೇ ಪ್ರೀತಿಸುವ, ಅಪಾರ ಜನತೆಗೆ ಮಾದರಿಯಾಗಿರುವ ಗಾಂಧೀಜಿಯವರ ಈ ಪ್ರೇಮ, ಅವರ ಕುಟುಂಬದಲ್ಲಿ ಅಹಿತಕರ ವಾತಾವರಣವನ್ನು ಮೂಡಿಸಿತ್ತು. ಗಾಂಧೀಜಿಯವರ ಪುತ್ರ ದೇವ್ ದಾಸ್ ಈ ಇರಿಸುಮುರಿಸಿನ ಸಂಬಂಧವನ್ನು ಸತತ ಪ್ರಯತ್ನದ ಮೂಲಕ ನಿವಾರಿಸಿದರು ಎಂಬುದಾಗಿ ಪುಸ್ತಕದಲ್ಲಿ ಬರೆಯಲಾಗಿದೆ. ಈ ಪ್ರಕರಣಕ್ಕೆ ಅತ್ಯಂತ ನಿಕಟವಾಗಿದ್ದ ಕುಟುಂಬದ ಸದಸ್ಯರೊಬ್ಬರೆ ಇದನ್ನು ದಾಖಲಿಸಿರುವುದರಿಂದ ಇದು ಸತ್ಯಕ್ಕೆ ದೂರವಾದದ್ದು ಅನ್ನುವಂತಿಲ್ಲ.

ಪ್ರೀತಿಯ ಬಗ್ಗೆ ಮಾತನಾಡುವಾಗ ಕೃಷ್ಣ-ರಾಧೆಯ ಉದಾಹರಣೆ ಬರುತ್ತದೆ. ಲೋಕೋದ್ಧಾರಕ, ಭಗವದ್ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಪರಮಾತ್ಮನ ಪ್ರೀತಿ ಆರಾಧಿಸಲ್ಪಡುತ್ತದೆ. ಪ್ರೀತಿ-ಪ್ರೇಮ-ಪ್ರಣಯ ಅಂದಾಗ ಪುರಾಣದ ದುಶ್ಯಂತ-ಶಾಕುಂತಲೆ ಗೋಚರವಾಗುತ್ತಾರೆ. ತನ್ನ ಪ್ರೀತಿಯ ಕುರುಹಾಗಿ ಮುಮ್ತಾಜ್ ಕಟ್ಟಿಸಿದ, ಜಗತ್ತಿನ ಅಚ್ಚರಿಯಾಗಿ ನಿಂತಿರುವ ಭವ್ಯವಾದ, ಅತಿ ಸುಂದರವಾದ ತಾಜ್ ಮಹಲ್ ಶಹಜಹಾನ್-ಮುಮ್ತಾಜ್ ಪ್ರೇಮವನ್ನು ಸಾರುತ್ತಿದೆ.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರೂ ಪ್ರೀತಿಯ ಬಲೆಗೆ ಬಿದ್ದವರು ಮತ್ತು ಪ್ರೀತಿಯ ಸವಿ ಉಂಡವರು. ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‍ಬ್ಯಾಟನ್ ಅವರ ಪತ್ನಿ ಎಡ್ವಿನಾ ಬ್ಯಾಟನ್ ಮತ್ತು ನೆಹರು ಪರಸ್ಪರ ಪ್ರೇಮಿಸುತ್ತಿದ್ದರು ಎಂಬ ಅಂಶ ಒಂಥರಾ ಓಪನ್ ಸೀಕ್ರೆಟ್! ಈ ಜೋಡಿಯ ಪ್ರೇಮಪ್ರಕರಣ ಹಲವಾರು ಪುಸ್ತಕಗಳಲ್ಲಿ ದಾಖಲಾಗಿವೆ. ಇವರಿಬ್ಬರ ನಡುವೆ ಓಡಾಡಿದ ನೂರಾರು ಪ್ರೇಮಪತ್ರಗಳನ್ನು 'ಎಡ್ವಿನಾ ಮೌಂಟ್‌ಬ್ಯಾಟನ್: ಎ ಲೈಫ್ ಆಫ್ ಹರ್ ಒನ್' ಎಂಬ ಪುಸ್ತಕ ಓದುತ್ತದೆ.

WD
ಪ್ರೀತಿ-ಪ್ರೇಮದ ವಿಷಯಕ್ಕೆ ಬಂದರೆ ನೆಹರೂ ಕುಟುಂಬದ ಪ್ರೇಮಗಾಥೆಗಳು ಮುಂದುವರಿಯುತ್ತಲೇ ಹೋಗಿವೆ. ನೆಹರೂ ಪುತ್ರಿ ಇಂದಿರಾ ಗಾಂಧಿಯವರೂ, ಅವರು ವರಿಸಿದ ಫಿರೋಜ್ ಖಾನ್ ಅವರ ಪ್ರೇಮಪಾಶಕ್ಕೆ ಬಿದ್ದಿದ್ದರು ಎಂದು ಹೇಳಲಾಗುತ್ತದೆ. ವ್ಯಾಪಾರವೃತ್ತಿಯನ್ನು ಹೊಂದಿದ್ದ ಫಿರೋಜ್ ಕುಟುಂಬ, ನೆಹರೂ ಕುಟುಂಬಕ್ಕೆ ಹತ್ತಿರವಾಗಿತ್ತು. ನವಾಬ್ ಖಾನ್ ಪುತ್ರ ಫಿರೋಜ್ ಖಾನ್, ವಿವಾಹದ ನಂತರ ಫಿರೋಜ್ ಗಾಂಧಿ ಎಂಬುದಾಗಿ ಹೆಸರು ಬದಲಿಸಿಕೊಂಡಿದ್ದರು ಎಂಬುದಾಗಿ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದೆ.

ಇಂದಿರಾ ಪುತ್ರರಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಅವರದ್ದೂ ಸಹ ಪ್ರೇಮ ವಿವಾಹ. ರಾಜೀವ್ ಗಾಂಧಿಯೆಡೆಗಿನ ಸೋನಿಯಾ ಗಾಂಧಿ ಪ್ರೇಮ ಅವರನ್ನು ಈ ರಾಷ್ಟ್ರದ ಅತ್ಯುನ್ನತ ಪದವಿಯ ಅತ್ಯಂತ ಸನಿಹಕ್ಕೆ ತಂದು ನಿಲ್ಲಿಸಿದೆ. ರಾಜೀವ್ ಪುತ್ರಿ ಪ್ರಿಯಾಂಕ ಗಾಂಧಿ ಸಹ ತಾನೂ ಪ್ರೇಮಿಸಿದ ರಾಬರ್ಟ್ ವಾದ್ರಾರನ್ನು ವರಿಸಿ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ರಾಹುಲ್ ಗಾಂಧಿಯವರ ಪ್ರೇಮ ಸಾಫಲ್ಯಕ್ಕೆ ಅವರ ಪ್ರಿಯತಮೆ ವಿದೇಶದವರಾಗಿದ್ದು, ಆಕೆಯ ಪೌರತ್ವ ಇವರ ರಾಜಕೀಯ ಜೀವನಕ್ಕೆ ಅಡ್ಡಿಯಾಗಬಹುದೆಂಬ ಅಳುಕು ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಹೀಗೆ... ಸಾರ್ವಕಾಲಿಕವಾದ, ಸಾರ್ವತ್ರಿಕವಾದ, ಚಿರಂತನವಾಗಿರುವ ಪ್ರೀತಿ ಎಂಬುದು ಗೆಲ್ಲದ ಹೃದಯಗಳು ಇವೆಯಾ? ಸಾಫಲ್ಯ, ವೈಫಲ್ಯ, ಏಕಮುಖ, ದ್ವಿಮುಖ ಇವುಗಳನ್ನೆಲ್ಲ ಬದಿಗಿಟ್ಟು, ಬರಿಯ ಪ್ರೀತಿಯ ಬಗ್ಗೆ ಮಾತ್ರ ಯೋಚಿಸಿದರೆ, ಈ ಸುಂದರ ಭಾವವನ್ನು ಅನುಭವಿಸದ ಮನುಜರೇ ಇಲ್ಲ ಎಂದು ಒಂದೇ ಏಟಿಗೆ ಹೇಳಬಹುದು. ಪ್ರೀತಿಗೆ ಘಟಾನುಘಟಿಗಳು ಅಥವಾ ಹುಲುಮಾನವರು, ಬಡವ ಬಲ್ಲಿದನೆಂಬ ಭೇದ ಇಲ್ಲವೇ ಇಲ್ಲ!

"ಒಲಿದ ಜೀವ ಜತೆಯಲಿರಲು ಬಾಳು ಸುಂದರ" ಅಂತ ಕವಿ ಹೇಳಿದ್ದಾರೆ. ಅದೇನೆ ಇರಲಿ, ಒಲಿದ ಜೀವ ಜತೆಯಲಿರುವ ಆ ಕ್ಷಣ ನಿಜಕ್ಕೂ ಸುಂದರ, ಮಧುರ!