ಜೀವನ ಅಂಧಕಾರ ಮಾಡದಿರಲಿ ದೀಪಾವಳಿ!

PTI
ದೀಪಾವಳಿ ಪಟಾಕಿ ಬಿಡುವ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಮುಂದಿನ ಬದುಕೇ ಕತ್ತಲಾಗುವ ಆತಂಕ ಇದ್ದೇ ಇದೆ. ಹೀಗಾಗಿ ಪಟಾಕಿ ಹಚ್ಚುವಾಗ ಅತ್ಯಂತ ಜಾಗ್ರತೆ ವಹಿಸುವುದು ಅತ್ಯಗತ್ಯ.

ಸುಡುಮದ್ದು ಬಳಸುವ ವೇಳೆ ಸುಟ್ಟ ಗಾಯಗಳಾಗುವ ಪ್ರಕರಣಗಳಲ್ಲಿ ಆಕಸ್ಮಿಕವಾಗಿಯೇ ಸಂಭವಿಸುವಂಥವು. ಎಲ್ಲೋ ಒಂದೆರಡು ಪ್ರಕರಣಗಳು ದ್ವೇಷಸಾಧನೆಯ ಉದ್ದೇಶ ಹೊಂದಿದವುಗಳೂ ಇರಬಹುದು. ಆದರೆ ಪಟಾಕಿಯಿಂದ ಆಕಸ್ಮಿಕವಾಗಿ ಏನೂ ತೊಂದರೆಯಾಗದಂತೆ ತಡೆಗಟ್ಟಬೇಕಾದರೆ ಸೂಕ್ತ ಮುನ್ನೆಚ್ಚರಿಕೆ ವಹಿಸಿದರಾಯಿತು.
PTI


ಸುಟ್ಟ ಗಾಯವಾದ ತಕ್ಷಣ ಭಯಪಟ್ಟು ಏನೇನೋ ಮಾಡುವ ಬದಲಿಗೆ, ಸೂಕ್ತ ವೈದ್ಯರೊಬ್ಬರನ್ನು ಸಂಪರ್ಕಿಸಿ ಯಾವ ಪ್ರಥಮ ಚಿಕಿತ್ಸೆ ಮಾಡಬಹುದು ಎಂಬ ಮಾಹಿತಿ ಪಡೆದುಕೊಂಡರೆ, ದೊಡ್ಡ ಅನಾಹುತವು ತಪ್ಪಿ ಹೋಗುತ್ತದೆ. ಕೆಲವರು ನೋವು ತಡೆಯಲಾರದೆ ಟೂತ್ ಪೇಸ್ಟ್ ಹಚ್ಚುತ್ತಾರೆ. ಇದು ಸರ್ವಥಾ ಸಲ್ಲದು ಎನ್ನುತ್ತಾರೆ ತಜ್ಞ ವೈದ್ಯರು.

ಪಟಾಕಿ ಹಚ್ಚುವಾಗ ಹೆಚ್ಚಾಗಿ ಗಾಯವಾಗುವುದು ಮುಖ ಮತ್ತು ಕೈಗಳಿಗೆ. ಅದರಲ್ಲೂ ಕಣ್ಣಿನ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೆಚ್ಚಾಗಿ ಮಕ್ಕಳೇ ಈ ಸಾಹಸಕ್ಕೆ ಮುಂದಾಗುವುದರಿಂದ ಅವರಲ್ಲಿ ಗಾಯಗಳೂ ಹೆಚ್ಚು.

ಹೀಗಾಗಿ ದೀಪಾವಳಿ ಎಂದರೆ ಬೆಳಕು-ಶಬ್ದದ ಹಬ್ಬ. ಸಂಭ್ರಮಿಸಬೇಕು ಎಂಬುದು ಕೂಡ ಸತ್ಯ. ಆದರೆ ಪಟಾಕಿ ಸುಟ್ಟು ಸಂಭ್ರಮಿಸುವ ಮುನ್ನ ಮುನ್ನೆಚ್ಚರಿಕೆ ವಹಿಸಿ. ಪಟಾಕಿಗಳನ್ನು ಬಯಲಿನಂತಹ ಮುಕ್ತ ಪ್ರದೇಶಗಳಲ್ಲಿ ಸುಡಬೇಕು. ಹಾಗೆಯೇ ಅಧಿಕ ಶಬ್ದ ಮಾಡುವ, ಅಧಿಕ ಹೊಗೆ ಸೂಸುವ ಪಟಾಕಿಗಳನ್ನು ಹಚ್ಚಿದಲ್ಲಿ, ಇದರಿಂದ ಪರಿಸರಕ್ಕೂ ಕೆಡುಕು, ನೆರೆಹೊರೆಯವರಿಗೂ ಸಿಡುಕು.

ಪಟಾಕಿ ಹಿತ-ಮಿತವಾಗಿ, ಎಚ್ಚರಿಕೆಯಿಂದ ಬಳಸಿ, ಸಂಭ್ರಮದ ದೀಪಾವಳಿ ನಿಮ್ಮದಾಗಿಸಿಕೊಳ್ಳಿ.