ದುಬೈ: ಭಾರತ–ಪಾಕಿಸ್ತಾನ ತಂಡಗಳು ಇಲ್ಲಿನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎ ಗುಂಪಿನ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ.
ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಬಂಧ ಹದಗೆಟ್ಟ ಕಾರಣ ಉಭಯ ದೇಶಗಳ ನಡುವಿನ ಪಂದ್ಯಕ್ಕೆ ಭಾರತದಾದ್ಯಂತ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಟಾಸ್ ವೇಳೆ ಎರಡೂ ತಂಡಗಳ ನಾಯಕರು ಸಾಂಪ್ರದಾಯಿಕ ಹಸ್ತಲಾಘವ ಮಾಡದೇ ಹಿಂತಿರುಗಿರುವು ಚರ್ಚೆಗೆ ಕಾರಣವಾಗಿದೆ.
ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಪಾಕ್ ನಾಯಕ ಸಲ್ಮಾನ್ ಆಘಾ ಇಬ್ಬರೂ ಹ್ಯಾಂಡ್ ಶೇಕ್ ಮಾಡಲೇ ಇಲ್ಲ. ಅಲ್ಲದೇ ಮುಖಕ್ಕೆ ಮುಖ ತಿರುಗಿಸಿಯೂ ನೋಡಲಿಲ್ಲ. ಪಾಕ್ ನಾಯಕ ಸಲ್ಮಾನ್ ಟಾಸ್ ಗೆದ್ದಿದ್ದರು.
ನಾಣ್ಯ ಚಿಮ್ಮುವ ವೇಳೆ ಎರಡು ತಂಡಗಳ ನಾಯಕರು ಹ್ಯಾಂಡ್ ಶೇಕ್ ಮಾಡುವುದು ಅಂತರರಾಷ್ಟ್ರೀಯ ಕ್ರಿಕೆಟ್ನ ಸಂಪ್ರದಾಯ. ಆದರೆ, ಟಾಸ್ ಬಳಿಕ ಟಿವಿ ನಿರೂಪಕ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿ ಇಬ್ಬರೂ ಡ್ರೆಸ್ಸಿಂಗ್ ಕೊಠಡಿಯತ್ತ ಸಾಗಿದ್ದಾರೆ.
ಟಾಸ್ ಮಾಡುವಾಗ ಕೈಕುಲುಕುವುದು ಕಡ್ಡಾಯವಾಗಿರುವ ಕೆಲವು ಟೂರ್ನಮೆಂಟ್ಗಳಿವೆ. ಅಚ್ಚರಿಯೆಂದರೆ ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದ ಟಾಸ್ ಸಮಯದಲ್ಲಿಯೂ ಯುಎಇ ನಾಯಕ ಮುಹಮ್ಮದ್ ವಸೀಮ್ ಅವರೊಂದಿಗೆ ಕೈಕುಲುಕಲಿಲ್ಲ ಎನ್ನಲಾಗಿದೆ.