ಮುಂಬೈ: ಐಪಿಎಲ್ 2025 ಗೆದ್ದ ಬಳಿಕ ವಿಜಯೋತ್ಸವ ಆಚರಿಸಲು ಹೋಗಿ 11 ಜನರ ಸಾವಿಗೆ ಕಾರಣವಾದ ಬೆನ್ನಲ್ಲೇ ಈಗ ಆರ್ ಸಿಬಿ ತಂಡದ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳಲು ಮುಂದಾಗಿದೆ.
ಜೂನ್ 14 ರಂದು ಮುಂಬೈನಲ್ಲಿ ಕೌನ್ಸಿಲ್ ಸಭೆ ನಡೆಯಲಿದ್ದು, ಈ ವೇಳೆ ಆರ್ ಸಿಬಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ. ಜೂನ್ 3 ರಂದು ಐಪಿಎಲ್ ಗೆದ್ದ ಬಳಿಕ ಮರುದಿನವೇ ಬೆಂಗಳೂರಿಗೆ ಬಂದಿದ್ದ ಆರ್ ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ವಿಜಯೋತ್ಸವ ಆಚರಿಸಲು ತೀರ್ಮಾನಿಸಿತ್ತು.
ಸ್ಟೇಡಿಯಂಗೆ ಉಚಿತ ಪ್ರವೇಶವಿದೆ ಎಂಬ ಕಾರಣಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದರಿಂದಾಗಿ ನೂಕು ನುಗ್ಗಲು ಉಂಟಾಗಿ 11 ಜನ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಪ್ರತಿಕ್ರಿಯಿಸಿದ್ದ ಬಿಸಿಸಿಐ ಇದನ್ನು ನೋಡುತ್ತಾ ಕೂರಲು ಸಾಧ್ಯವಿಲ್ಲ ಎನ್ನುವ ಮೂಲಕ ಆರ್ ಸಿಬಿ ವಿರುದ್ಧ ಕ್ರಮ ಕೈಗೊಳ್ಳುವ ಸುಳಿವು ನೀಡಿತ್ತು.
ಇದೀಗ ಶನಿವಾರದಂದು ಮುಂಬೈನಲ್ಲಿ ಬಿಸಿಸಿಐ ಸಾಮಾನ್ಯ ಸಭೆ ನಡೆಯಲಿದ್ದು, ಈ ವೇಳೆ ಆರ್ ಸಿಬಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಆರ್ ಸಿಬಿಯನ್ನು ಒಂದು ವರ್ಷದ ಮಟ್ಟಿಗೆ ನಿಷೇಧಿಸಬಹುದು ಎಂಬ ಸುದ್ದಿಗಳೂ ಇತ್ತು. ಇದೀಗ ಬಿಸಿಸಿಐ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.