ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

Sampriya

ಭಾನುವಾರ, 15 ಜೂನ್ 2025 (14:13 IST)
Photo Courtesy X
ಲಂಡನ್‌: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಅವರ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಹೀಗಾಗಿ ತುರ್ತಾಗಿ ಭಾರತಕ್ಕೆ ವಾಪಸಾಗಿದ್ದಾರೆ. 

ಗಂಭೀರ್‌ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಅಭ್ಯಾಸ ಮುಂದುವರೆಸಿದ್ದು, ಈ ವಾರ ಗೌತಮ್ ಗಂಭೀರ್ ಇಂಗ್ಲೆಂಡ್​ಗೆ ಮರಳದಿದ್ದರೆ ಹಂಗಾಮಿ ಕೋಚ್​ನ ನೇಮಕ ಸಾಧ್ಯತೆಯಿದೆ. 

ಜೂನ್ 20 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿವಿಎಸ್​ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸುವಲ್ಲಿ ನಿರತವಾಗಿದೆ. ಹೊಸ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ತಂಡ ಲಂಡನ್​ನಲ್ಲಿ ಅಭ್ಯಾಸ ನಡೆಸುತ್ತಿದೆ. ಆದರೆ, ಈ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕಾಣಿಸಿಕೊಂಡಿಲ್ಲ.

ಗೌತಮ್ ಗಂಭೀರ್ ಭಾರತಕ್ಕೆ ಹಿಂತಿರುಗುತ್ತಿದ್ದಂತೆ, ಬಿಸಿಸಿಐ  ವಿವಿಎಸ್​ ಲಕ್ಷ್ಮಣ್ ಅವರನ್ನು ಇಂಗ್ಲೆಂಡ್​ಗೆ ಕಳುಹಿಸಿದ್ದಾರೆ. ಅಲ್ಲದೆ ಜೂನ್ 20 ರೊಳಗೆ ಗಂಭೀರ್​ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಪರಿಸ್ಥಿತಿ ಇರದಿದ್ದರೆ, ಭಾರತ ತಂಡವು ಲಕ್ಷ್ಮನ್ ಮುಂದಾಳತ್ವದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ತಂತ್ರಗಳನ್ನು ರೂಪಿಸಲಿದೆ.

ಈಗಾಗಲೇ ವಿವಿಎಸ್ ಲಕ್ಷ್ಮಣ್ ಅವರು ಇಂಗ್ಲೆಂಡ್​ನಲ್ಲಿರುವ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ಮತ್ತು ಭಾರತ ಎ ತಂಡಗಳ ನಡುವಣ ಅಭ್ಯಾಸ ಪಂದ್ಯದ ವೇಳೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ​ ಲಕ್ಷ್ಮಣ್ ಕಾಣಿಸಿಕೊಂಡರು.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ