ಆ ಒಂದು ಕರೆಗಾಗಿ ಎಂಟು ವರ್ಷ ಕಾದೆ: ವನವಾಸ ಮುಗಿಸಿ ಟೆಸ್‌ ತಂಡಕ್ಕೆ ಮರಳಿದ ತ್ರಿಶತಕದ ಸರದಾರ ಕರುಣ್‌ ನಾಯರ್

Sampriya

ಭಾನುವಾರ, 25 ಮೇ 2025 (12:34 IST)
Photo Courtesy X
ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದಲ್ಲಿ ಮಗದೊಮ್ಮೆ ಅವಕಾಶ ಸಿಕ್ಕಿರುವುದಕ್ಕೆ ಹಮ್ಮೆಯಿದೆ. ಈ ಕರೆಗಾಗಿ ಕಾತರದಿಂದ ಕಾಯುತ್ತಿದ್ದೆ ಎಂದು ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಕನ್ನಡಿಗ ಕರುಣ್ ನಾಯರ್ ಸಂತೋಷ ವ್ಯಕ್ತಪಡಿಸಿದ್ದಾರೆ.

33 ವರ್ಷದ ಕರುಣ್ ಕೊನೆಯದಾಗಿ 2017ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕರುಣ್ ನಾಯರ್ ಭಾಜನರಾಗಿದ್ದರು.

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಭಾರತ ತಂಡದಲ್ಲಿ ಕರುಣ್ ನಾಯರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ದೇಶೀಯ ಕ್ರಿಕೆಟ್‌ನಲ್ಲಿ ಕರುಣ್ ನೀಡಿರುವ ಅಮೋಘ ನಿರ್ವಹಣೆಗೆ ಮನ್ನಣೆ ದೊರಕಿದಂತಾಗಿದೆ. ಕರ್ನಾಟಕದ ಕೆ.ಎಲ್‌.ರಾಹುಲ್‌ ಮತ್ತು ವೇಗಿ ಪ್ರಸಿದ್ಧ ಕೃಷ್ಣ ಕೂಡ ಸ್ಥಾನ ಪಡೆದಿದ್ದಾರೆ.

2024-25ರ ಸಾಲಿನಲ್ಲಿ ವಿದರ್ಭ ರಣಜಿ ಟ್ರೋಫಿ ಗೆಲ್ಲುವಲ್ಲಿ ಕರುಣ್ ಮಹತ್ವದ ಪಾತ್ರ ವಹಿಸಿದ್ದರು. ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಶತಕ ಸೇರಿದಂತೆ 863 ರನ್ ಗಳಿಸಿದ್ದರು. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ ಐದು ಶತಕ ಸೇರಿದಂತೆ 779 ರನ್ ಪೇರಿಸಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ