ಕ್ರಿಕೆಟಿಗ ಪೃಥ್ವಿ ಶಾ ಮೇಲೆ ದಾಳಿ: ಹಣ ವಸೂಲಿಯೇ ಗುರಿ?

ಶುಕ್ರವಾರ, 17 ಫೆಬ್ರವರಿ 2023 (08:50 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಪೃಥ‍್ವಿ ಶಾ ಮೇಲೆ ದಾಳಿ ನಡೆಸಿದ ಸಪ್ನಾ ಗಿಲ್ ಮತ್ತು ತಂಡದ ಮೇಲೆ ಪ್ರಕರಣ ದಾಖಲಾಗಿದೆ.

ಮುಂಬೈನ ಸಾಂತಾಕ್ರೂಜ್ ದೇಶೀಯ ವಿಮಾನ ನಿಲ್ದಾಣ ಬಳಿಯ ಸಹರಾ ಪಂಚತಾರಾ ಹೋಟೆಲ್ ಆವರಣದಲ್ಲಿ ಗಲಾಟೆ ನಡೆದಿತ್ತು. ತಮ್ಮ ಸ್ನೇಹಿತ ಆಶಿಷ್ ಯಾದವ್ ಜೊತೆ ಪೃಥ್ವಿ ಶಾ ಹೋಟೆಲ್ ನ ಮಾನ್ಶನ್ ಕ್ಲಬ್ ಗೆ ಬಂದಿದ್ದರು. ಈ ವೇಳೆ ಶೋಭಿತ್ ಠಾಕೂರ್ ಎಂಬಾತ ಸೆಲ್ಫೀ ಕೇಳಿದ್ದಾನೆ. ಆಗ ಆತನಿಗೆ ಪೃಥ‍್ವಿ ಸೆಲ್ಫೀ ನೀಡಿದ್ದರು. ಮತ್ತೆ ಇನ್ನೊಂದು ಗುಂಪಿನೊಂದಿಗೆ ಬಂದು ಸೆಲ್ಫೀಗಾಗಿ ಮನವಿ ಮಾಡಿದಾಗ ಪೃಥ್ವಿ ನಯವಾಗಿಯೇ ನಿರಾಕರಿಸಿದ್ದರು.

ಈ ವೇಳೆ ವಾಗ್ವಾದ ನಡೆದಿದೆ. ಆಗ ಹೋಟೆಲ್ ವ್ಯವಸ್ಥಾಪಕರು ಆ ಗುಂಪನ್ನು ಹೊರಗೆ ಕಳುಹಿಸಿದ್ದಾರೆ. ಪೃಥ‍್ವಿ ಶಾ ಊಟ ಮುಗಿಸಿ ಗೆಳೆಯನೊಂದಿಗೆ ಹೊರಗೆ ಬಂದಾಗ ಕಾದು ಕುಳಿತಿದ್ದ ಅದೇ ಗುಂಪು ಪೃಥ್ವಿ ಕಾರು ಗಾಜು ಒಡೆದಿದ್ದಲ್ಲದೆ, ಸಪ್ನಾ ಗಿಲ್ ಎಂಬಾಕೆ ಹಾಗೂ ಆಕೆಯ ಸಹಚರರು ಬೇಸ್ ಬಾಲ್ ನಿಂದ ಹಲ್ಲೆ ನಡೆಸಲು ಮುಂದಾಗಿದೆ. ಅಲ್ಲಿಂದ ಇನ್ನೊಂದು ಕಾರಿನಲ್ಲಿ ಪೃಥ‍್ವಿ ಶಾ ತೆರಳುವಾಗ ಹಿಂಬಾಲಿಸಿಕೊಂಡು ಬಂದಿದ್ದಾರೆ. ಆರೋಪಿ ಸಪ್ನಾ ಗಿಲ್ 50000 ರೂ. ಕೊಡದೇ ಇದ್ದರೆ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಸಂಬಂಧ ಪೃಥ್ವಿ ಶಾ ಮತ್ತು ಗೆಳೆಯ ಪೊಲೀಸರಿಗೆ ದೂರು ನೀಡಿದ್ದು, ಕೃತ್ಯದಲ್ಲಿ ಭಾಗಿಯಾದ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕುಡಿದ ಮತ್ತಿನಲ್ಲಿ ಹಣಕ್ಕಾಗಿ ಆರೋಪಿಗಳು ಈ ಕೃತ್ಯವೆಸಗಿರಬಹುದು ಎನ್ನಲಾಗಿದೆ. ಇದೀಗ ಪೃಥ‍್ವಿ ಶಾಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ