ಸೋತಾಗ ಸುದ್ದಿಗೋಷ್ಠಿಗೆ ಕೋಚ್ ದ್ರಾವಿಡ್ ಕಳುಹಿಸುವ ರೋಹಿತ್ ಶರ್ಮಾ!

Krishnaveni K

ಸೋಮವಾರ, 29 ಜನವರಿ 2024 (10:09 IST)
ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಸೋತ ಬಳಿಕ ಫ್ಯಾನ್ಸ್ ಆಕ್ರೋಶ ರೋಹಿತ್ ಶರ್ಮಾ ಮೇಲೆ ತಿರುಗಿದೆ.

ಗೆಲ್ಲಬೇಕಿದ್ದ ಪಂದ್ಯವನ್ನು ಸೋತಿದ್ದಕ್ಕೆ ಫ್ಯಾನ್ಸ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಜೊತೆಗೆ ಸೋತ ಬಳಿಕ ಪತ್ರಿಕಾಗೋಷ್ಠಿಗೆ ರೋಹಿತ್ ಶರ್ಮಾ ಗೈರಾಗುವ ಚಾಳಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಟೀಕಿಸಿದ್ದಾರೆ.

ಹೆಚ್ಚಿನ ಸಂದರ್ಭದಲ್ಲಿ ತಂಡ ಸೋತಾಗ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಗೆ ಬರಲ್ಲ. ಬದಲಾಗಿ ಕೋಚ್ ರಾಹುಲ್ ದ್ರಾವಿಡ್ ಬರುತ್ತಾರೆ. ಇದು ಕಾಕತಾಳೀಯವೋ ಫ್ಯಾನ್ಸ್ ಆರೋಪವೇ ನಿಜವೋ ಗೊತ್ತಿಲ್ಲ. ಆದರೆ ಪ್ರತೀ ಬಾರಿಯೂ ಹೀಗೆ ಆಗುತ್ತಿರುವುದಂತೂ ನಿಜ. ನಿನ್ನೆಯ ಪಂದ್ಯದ ಬಳಿಕವೂ ದ್ರಾವಿಡ್ ಸುದ್ದಿಗೋಷ್ಠಿಗೆ ಬಂದಿದ್ದರು.

ಪ್ರತೀ ಬಾರಿ ಸರಣಿ ಆರಂಭಕ್ಕೆ ಮುನ್ನ ರೋಹಿತ್ ಸುದ್ದಿಗೋಷ್ಠಿಗೆ ಬರುತ್ತಾರೆ. ಕೆಲವೊಂದು ಪಂದ್ಯ ಗೆದ್ದಾಗಲು ಬಂದಿದ್ದು ಇದೆ. ಆದರೆ ಸೋತಾಗ ಮಾಧ್ಯಮಗಳ ಮುಂದೆ ಬಂದಿದ್ದು ಕಡಿಮೆ. ಹೀಗಾಗಿ ಅಭಿಮಾನಿಗಳು ಈ ಚಾಳಿಯನ್ನು ಟೀಕಿಸಿದ್ದಾರೆ. ಸೋತಾಗಲೂ ಮಾಧ್ಯಮ, ಫ್ಯಾನ್ಸ್ ಎದುರಿಸುವ ತಾಕತ್ತು ಕ್ಯಾಪ್ಟನ್ ಗಿರಬೇಕು ಎಂದಿದ್ದಾರೆ.

ಈ ಮೊದಲು ಕೊಹ್ಲಿ ನಾಯಕರಾಗಿದ್ದಾಗ ಹೀಗೆ ಮಾಡುತ್ತಿರಲಿಲ್ಲ. ಸೋತಾಗಲೂ ತಾವೇ ಎಷ್ಟೋ ಬಾರಿ ಪತ್ರಿಕಾಗೋಷ್ಠಿಗೆ ಬಂದು ಮಾತನಾಡಿದ್ದು ಇದೆ. ಇದು ನಾಯಕನ ಗುಣ. ಬದಲಾಗಿ ಸೋತಾಗ ಬೇರೆಯವರನ್ನು ಮುಂದೆ ಬಿಟ್ಟು ತಾವು ಹಿಂದೆ ಕೂರಬಾರದು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ