ಬ್ಯಾಟಿಂಗ್ ನಲ್ಲಿ ಗಳಿಸಿದ್ದ ಗೌರವ ಕ್ಯಾಚ್ ಬಿಟ್ಟು ಕಳೆದುಕೊಂಡ ರಾಹುಲ್: ಭಾರತಕ್ಕೆ ಸೋಲು

ಭಾನುವಾರ, 4 ಡಿಸೆಂಬರ್ 2022 (19:16 IST)
Photo Courtesy: Twitter
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಮೊದಲ ಏಕದಿನ ಪಂದ್ಯವನ್ನು ಬಾಂಗ್ಲಾದೇಶ 1 ವಿಕೆಟ್ ನಿಂದ ರೋಚಕವಾಗಿ ಗೆದ್ದುಕೊಂಡಿದೆ.
 

ಮೊದಲು ಬ್ಯಾಟಿಂಗ್ ಮಾಡಿದ ಭಾರತ 41.2 ಓವರ್ ಗಳಲ್ಲಿ 186 ರನ್ ಗೆ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟಿಗರು ರನ್ ಗಳಿಸಲು ವಿಫಲರಾದರು. ಆದರೆ ಕೆಎಲ್ ರಾಹುಲ್ ಮಾತ್ರ ಏಕಾಂಗಿ ಹೋರಾಟ ನಡೆಸಿ 72 ರನ್ ಗಳಿಸಿದರು. ಇದರಿಂದಾಗಿ ಭಾರತ ಗೌರವಯುತ ಮೊತ್ತ ಗಳಿಸುವಂತಾಯಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 5, ಹೊಸೈನ್ 4 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ್ದ ಬಾಂಗ್ಲಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಭಾರತೀಯ ಬೌಲರ್ ಗಳು ಬಿಗುವಿನ ದಾಳಿ ನಡೆಸಿ ರನ್ ನಿಯಂತ್ರಿಸಿದ್ದಲ್ಲದೆ ನಿಯಮಿತವಾಗಿ ವಿಕೆಟ್ ಗಳಿಸುತ್ತಾ ಸಾಗಿದರು. ಹಾಗಿದ್ದರೂ ಲಿಟನ್ ದಾಸ್ (41), ಶಕೀಬ್ ಅಲ್ ಹಸನ್ (29) ರನ್ ಗಳಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಲಿಟನ್ ದಾಸ್ ಮತ್ತು ಶಕೀಬ್ ವಿಕೆಟ್ ಪಡೆದ ಭಾರತೀಯ ಬೌಲರ್ ಗಳು ಎದುರಾಳಿಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು. ಇನ್ನೇನು ಭಾರತ ಸುಲಭವಾಗಿ ಗೆಲ್ಲುತ್ತದೆ ಎನ್ನುವ ಹಂತದಲ್ಲಿ ಮೆಹದಿ ಹಸನ್ ಕಂಟಕವಾದರು. ಆದಷ್ಟು ತಾವೇ ಬಾಲ್ ಗಳನ್ನು ಎದುರಿಸಿ ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ ಗಳಿಸಿ ತಂಡಕ್ಕೆ ರೋಚಕ ಗೆಲುವು ಕೊಡಿಸಿದರು. ಒಂದು ವೇಳೆ ಶ್ರಾದ್ಧೂಲ್ ಠಾಕೂರ್ ಎಸೆತದಲ್ಲಿ ಮೆಹದಿ ನೀಡಿದ್ದ ಕ್ಯಾಚ್ ಕೆಎಲ್ ರಾಹುಲ್ ಪಡೆದಿದ್ದರೆ ಗೆಲುವು ಭಾರತದ್ದಾಗುತ್ತಿತ್ತು. ಆದರೆ ಎರಡು ಸತತ ಎಸೆತಗಳಲ್ಲಿ ಭಾರತ ಕ್ಯಾಚ್ ಕೈ ಚೆಲ್ಲಿದ್ದು ದುಬಾರಿಯಾಯಿತು. ಅಂತಿಮವಾಗಿ 46 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದಾಗ ಬಾಂಗ್ಲಾ ಸಂಭ್ರಮ ಮೇರೆ ಮೀರಿತ್ತು. ಭಾರತದ ಪರ ಮೊಹಮ್ಮದ್  ಸಿರಾಜ್ 3, ಕುಲದೀಪ್ ಸೇನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ