ಬೆಂಗಳೂರು: ಸ್ಯಾಂಡಲ್ವುಡ್ ಕ್ವೀನ್, ನಟಿ ರಮ್ಯಾ ಅವರು ಈಚೆಗೆ ಹಂಚಿಕೊಂಡಿದ್ದ ಪೋಸ್ಟ್ ನಟ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಡಿ ಬಾಸ್ ಅಭಿಮಾನಿಗಳಿಗೆ ಮತ್ತು ರಮ್ಯಾ ನಡುವಿನ ಸಮರ ಮತ್ತೊಂದು ಸ್ವರೂಪಕ್ಕೆ ತಿರುಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದ ನಟಿ ರಮ್ಯಾ ಇದೀಗ ದರ್ಶನ್ ಅಭಿಮಾನಿಗಳ ವಿರುದ್ಧವೂ ಕಿಡಿಕಾರಿದ್ದಾರೆ. ರಮ್ಯಾ ಅವರ ನ್ಯಾಯದ ಪೋಸ್ಟ್ಗೆ ದರ್ಶನ್ ಅಭಿಮಾನಿಗಳು ಕೆರಳಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ. ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣ ಎಂದು ಈ ಹಿಂದೆ ತಮ್ಮ ಇನ್ಸ್ಟಾ ಸ್ಟೇಟಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಆ ಪೋಸ್ಟ್ ವೈರಲ್ ಆಗ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೆಟ್ಟ ಪದಗಳಿಂದ ರಮ್ಯಾ ವಿರುದ್ದ ಸೋಶಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಿದ್ದರು.
ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಂಗೆ ಸ್ವಾಗತ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ರಮ್ಯಾ, ಬಹಿರಂಗ ಆಹ್ವಾನ ನೀಡಿದ್ದಾರೆ. ಮೊದಲ ಪೋಸ್ಟ್ನಲ್ಲಿ ಕೇಸ್ ಯಾವುದೇ ಇರಲಿ, ಯಾರದ್ದೇ ಇರಲಿ, ಸದಾ ನ್ಯಾಯದ ಪರ. ತೆರೆಯಮೇಲಷ್ಟೇ ಅಲ್ಲ ನಿಜ ಜೀವನದಲ್ಲೂ ಹಿರೋಯಿನ್ ರಮ್ಯಾ ಎಂದು ಬರೆಯಲಾಗಿದೆ.
ಮತ್ತೊಂದು ಪೋಸ್ಟ್ನಲ್ಲಿ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್ಗಳೇ ಸಾಕ್ಷಿ ಎಂದು ಪೋಸ್ಟ್ ಮಾಡಿ ಕಾಲೆಳೆದಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳು ಬಂಧನವಾಗಿದ್ದರು. ಜೈಲುವಾಸದ ನಂತರ ಎಲ್ಲಾ ಆರೋಪಿಗಳು ಹೈಕೋರ್ಟ್ನಿಂದ ಜಾಮೀನು ಪಡೆದಿದ್ದರು. ಇದನ್ನು ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಮುಗಿದಿದೆ. ಹೈಕೋರ್ಟ್ ನಡೆಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಂತಿಮ ಆದೇಶ ಕೆಲವೇ ದಿನದಲ್ಲಿ ಪ್ರಕಟವಾಗಲಿದೆ.