ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ಆದರೆ ಅವರ ಕುತ್ತಿಗೆಯಲ್ಲಿ ಯಾವತ್ತೂ ತಾಳಿ ಇರಲ್ಲ. ಇದನ್ನು ನೆಟ್ಟಿಗರು ಪ್ರಶ್ನಿಸಿದ್ದರು. ಇದೀಗ ಅದಕ್ಕೆ ವೈಷ್ಣವಿ ಗೌಡ ಸ್ಪಷ್ಟನೆ ನೀಡಿದ್ದಾರೆ.
ವೈಷ್ಣವಿ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ವೈಯಕ್ತಿಕ ಜೀವನದ ಆಗು ಹೋಗುಗಳ ಬಗ್ಗೆ ವ್ಲಾಗ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಅವರು ಅನುಕೂಲ್ ಮಿಶ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ಹನಿಮೂನ್ ಗೆ ಮನಾಲಿಗೆ ಹೋಗಿದ್ದಾಗ ತೆಗೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಆದರೆ ಆ ಫೋಟೋಗಳಲ್ಲಿ ವೈಷ್ಣವಿ ಕುತ್ತಿಗೆಯಲ್ಲಿ ತಾಳಿ ಇಲ್ಲ. ಇದನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಮದುವೆಯಾಗಿ ನಾಲ್ಕು ದಿನ ಆಗಿಲ್ಲ. ಆಗಲೇ ತಾಳಿ ತೆಗೆದುಬಿಟ್ಟಿರಾ? ಇದೆಂಥಾ ಫ್ಯಾಶನ್ ಎಂದು ಕೆಲವರು ಕಿಡಿ ಕಾರಿದ್ದರು. ಅದೆಲ್ಲದಕ್ಕೂ ಅವರೀಗ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಉತ್ತರ ಕೊಟ್ಟಿದ್ದಾರೆ.
ಉತ್ತರ ಭಾರತದಲ್ಲಿರುವ ತಮ್ಮ ಪತಿಯ ಊರಿಗೆ ದೇವರ ದರ್ಶನಕ್ಕೆ ವೈಷ್ಣವಿ ಹೋಗಿದ್ದಾರೆ. ಈ ಪ್ರವಾಸದ ವ್ಲಾಗ್ ಮಾಡಿರುವ ವೈಷ್ಣವಿ ಆರಂಭದಲ್ಲೇ ತಾವೇಕೆ ಕರಿಮಣಿ ಸರ ಹಾಕಲ್ಲ ಎನ್ನುವುದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಪತಿಯ ಮನೆಯವರ ಕಡೆ ತಾಳಿ ಹಾಕುವ ಸಂಪ್ರದಾಯವಿಲ್ಲ. ನನ್ನ ಅತ್ತೆ ಕೂಡಾ ತಾಳಿ ಹಾಕಲ್ಲ. ಯಾಕೆ ಅಂತ ನಾನು ಕೇಳಿಲ್ಲ. ಆದರೆ ಅವರ ಕಡೆ ಮದುವೆಯಾದವರು ಕೈಗೆ ಒಂದು ದಾರ ಕಟ್ಟಿಕೊಳ್ಳುತ್ತಾರೆ ಹಣೆಗೆ ಕುಂಕುಮ ಮತ್ತು ಕಾಲಿಗೆ ಕಾಲುಂಗುರ ಮಾತ್ರ ಹಾಕಿಕೊಳ್ಳುತ್ತಾರೆ. ನಾನೂ ಅವರ ಮನೆ ಸಂಪ್ರದಾಯವನ್ನು ಫಾಲೋ ಮಾಡ್ತಿದ್ದೀನಿ ಅಷ್ಟೇ. ಅದರ ಹೊರತಾಗಿ ನನಗೆ ತಾಳಿ, ಸಂಪ್ರದಾಯದ ಬಗ್ಗೆ ಗೌರವವಿಲ್ಲ ಎಂದಲ್ಲ ಎಂದು ವೈಷ್ಣವಿ ಸ್ಪಷ್ಟನೆ ಕೊಟ್ಟಿದ್ದಾರೆ.