ಚಿಕನ್ ಫ್ರೈ ರುಚಿಯಾಗಿ ಮಾಡಿಲ್ಲ ಎಂದು ಸಿಟ್ಟಿನಿಂದ ಪತ್ನಿಯನ್ನೇ ಕೊಂದ ಭೂಪ ಗಂಡ!

ಮಂಗಳವಾರ, 24 ಆಗಸ್ಟ್ 2021 (08:02 IST)
ಪೀಣ್ಯ(ದಾಸರಹಳ್ಳಿ): ಚಿಕನ್ ಫ್ರೈ ರುಚಿಯಾಗಿಲ್ಲ ಎಂಬ ವಿಚಾರದಲ್ಲಿ ಆರಂಭವಾದ ಗಂಡ ಹೆಂಡಿರ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಹೆಸರಘಟ್ಟ ರಸ್ತೆಯ ತರಬನಹಳ್ಳಿಯಲ್ಲಿ ನಡೆದಿದೆ.ಶಿರೀನ್ಬಾನು (25) ಕೊಲೆಯಾದ ಗೃಹಿಣಿಯಾಗಿದ್ದು, ಈಕೆಯ ಪತಿ ಮುಬಾರಕ್ (32) ಕೊಲೆ ಮಾಡಿ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಗಿದ್ದಾನೆ.

ದಾವಣಗೆರೆ ಮೂಲದ ಶಿರೀನ್ಬಾನು ಮತ್ತು ಮುಬಾರಕ್ ಐದು ವರ್ಷಗಳ ಹಿಂದೆ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಮುಬಾರಕ್ ಹಾಸಿಗೆ ವ್ಯಾಪಾರ ನಡೆಸುತಿದ್ದ. ಶಿರೀನ್ ಗೃಹಿಣಿಯಾಗಿದ್ದಳು.
ಇಪ್ಪತ್ತು ದಿನಗಳ ಹಿಂದೆ ಶಿರೀನ್ಬಾನು ತಂಗಿ ತರಬನಹಳ್ಳಿಯ ಮನೆಗೆ ಆಗಮಿಸಿದ್ದಳು. ಈ ವೇಳೆ ಮಾಡಿದ್ದ ಚಿಕನ್ ಫ್ರೈ ರುಚಿಯಾಗಿರಲಿಲ್ಲ ಎಂದು ಮುಬಾರಕ್ ನಾದಿನಿಯ ಎದುರೇ ಹೆಂಡತಿಗೆ ಬೈದಿದ್ದ. ಅಡುಗೆ ಮಾಡಲು ಬರುವುದಿಲ್ಲವೇ ಎಂದು ಹಂಗಿಸಿದ್ದ. ಇದರಿಂದ ಶಿರೀನ್ ಭಾನು ಕೋಪಗೊಂಡಿದ್ದಳು. ತಂಗಿ ಊರಿಗೆ ಮರಳಿದ ಬಳಿಕ ಇದೇ ವಿಚಾರಕ್ಕೆ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಮುಬಾರಕ್ ದೊಣ್ಣೆಯಿಂದ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಜೋರಾಗಿ ಬಿದ್ದ ಪೆಟ್ಟಿನಿಂದ ಶಿರೀನ್ ಮೃತಪಟ್ಟಿದ್ದಾಳೆ. ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಮುಬಾರಕ್ ಹೆಂಡತಿ ಶವವನ್ನು ಹಾಸಿಗೆಯಲ್ಲಿ ಸುತ್ತಿ, ಚಿಕ್ಕಬಾಣಾವಾರ ಕೆರೆಗೆ ಎಸೆದಿದ್ದಾನೆ.

18 ದಿನಗಳಿಂದ ಮಗಳು ಫೋನ್ಗೆ ಸಿಗದಿರುವ ಬಗ್ಗೆ ಶಿರೀನ್ ಬಾನು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದರು. ಈ ಸಂಬಂಧ ಮುಬಾರಕ್ಗೆ ಕರೆ ಮಾಡಿದಾಗ ಆತ ಕುಂಟು ನೆಪ ಹೇಳುತ್ತಿದ್ದ. ಕುಟುಂಬಸ್ಥರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಪಿ ಮುಬಾರಕ್ ವಕೀಲರೊಂದಿಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿ ಶರಣಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ