ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಹೊಣೆಯಾಗಿ ಕಮಿಷನರ್ ಬಿ ದಯಾನಂದ್ ಅವರನ್ನು ಅಮಾನತು ಮಾಡಿದ ಸರ್ಕಾರದ ಆದೇಶ ವಿರೋಧಿಸಿ ಮಡಿವಾಳ ಕಾನ್ಸ್ ಟೇಬಲ್ ನರಸಿಂಹರಾಜು ರಾಜಭವನದ ಮುಂದೆ ಪ್ರತಿಭಟಿಸಿದರು. ಕೊನೆಗೆ ಅವರಿಗೆ ಆಗಿದ್ದೇನು ನೋಡಿ.
ಆರ್ ಸಿಬಿ ಆಟಗಾರರಿಗೆ ಮರುದಿನವೇ ಸನ್ಮಾನ ಏರ್ಪಡಿಸಲು ಸ್ವತಃ ಸಿಎಂ ಕಚೇರಿಯಿಂದಲೇ ಒತ್ತಡ ಬಂದಿತ್ತು ಎಂದು ವರದಿಯಾಗಿದೆ. ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಆರ್ ಸಿಬಿ ಆಟಗಾರರನ್ನು ವಿಮಾನ ನಿಲ್ದಾಣಕ್ಕೆ ಹೋಗಿ ಬರಮಾಡಿಕೊಂಡಿದ್ದರು.
ಆದರೆ ಯಾವಾಗ ಚಿನ್ನಸ್ವಾಮಿ ಮೈದಾನ ಬಳಿ ದುರಂತ ನಡೆಯಿತೋ ಸರ್ಕಾರ ಪೊಲೀಸರ ಮೇಲೆ ಕ್ರಮ ಕೈಗೊಂಡಿದೆ. ಕಮಿಷನರ್ ದಯಾನಂದ್ ಸೇರಿ ಪ್ರಮುಖ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇದು ಪೊಲೀಸ್ ಇಲಾಖೆಯೊಳಗೇ ಕೆಲವು ಸಿಬ್ಬಂದಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಒತ್ತಡ ಹಾಕಿ ಅಂದೇ ಕಾರ್ಯಕ್ರಮ ಮಾಡಿಸಿ ಕೊನೆಗೆ ಅನಾಹುತವಾದಾಗ ಪೊಲೀಸರನ್ನು ಹೊಣೆ ಮಾಡುತ್ತಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಮಡಿವಾಣ ಹೆಡ್ ಕಾನ್ಸ್ ಟೇಬಲ್ ನರಸಿಂಹರಾಜು ರಾಜಭವನದ ಮುಂದೆ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಕಮಿಷನರ್ ಅಮಾನತು ಆದೇಶ ಹಿಂಪಡೆಯಬೇಕು ಎಂದು ಅವರು ಪ್ರತಿಭಟನೆ ನಡೆಸಿದ್ದಾರೆ.
ಕೊನೆಗೆ ಅವರನ್ನು ವಿಧಾನಸೌಧ ಪೊಲೀಸರು ಅವರನ್ನು ಬಂಧಿಸಿದ್ದು, ಇನ್ನು ಈ ರೀತಿ ಮಾಡಲ್ಲ ಎಂದು ತಪ್ಪೊಪ್ಪಿಗೆ ಬರೆಸಿ ಬಿಡುಗಡೆ ಮಾಡಿದ್ದಾರೆ.