ನಿಸಾರ್ ಅಹಮ್ಮದ್ ಅವರನ್ನ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ನಮಗೆ ಗೌರವ ತಂದಿದೆ: ಸಿಎಂ ಸಿದ್ದರಾಮಯ್ಯ

ಗುರುವಾರ, 21 ಸೆಪ್ಟಂಬರ್ 2017 (12:17 IST)
ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರನ್ನ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು, ನಮಗೆ ಗೌರವ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ದಸರಾ ಉದ್ಘಾಟನೆ ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಿಎಂ, ನಿಸಾರ್ ಅಹಮದ್ ಅವರು ಎಲ್ಲರನ್ನೂ ಪ್ರೀತಿಸುವ, ಸ್ನೇಹ ಜೀವಿ, ಜಾತ್ಯಾತೀತತೆಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಎಂದು ಹೇಳಿದರು.

ಕೆ.ಎಸ್. ನಿಸಾರ್ ಅಹಮ್ಮದ್ ಅವರನ್ನ ದಸರಾ ಉದ್ಘಾಟನೆಗೆ ಆಹ್ವಾನಿಸುವ ಬಗ್ಗೆ ದಸರಾ ಸಮಿತಿಯಲ್ಲಿ ಚರ್ಚೆ ನಡೆದಾಗ ಪ್ರತಿಯೊಬ್ಬರೂ ಒಮ್ಮತದ ಒಪ್ಪಿಗೆ ಸೂಚಿಸಿದ್ದನ್ನ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ, ನಿಸಾರ್ ಅಹಮದ್ ಅವರ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಮೆಲುಕು ಹಾಕಿದರು. 1983ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ರಾಮಕೃಷ್ಣ ಹೆಗಡೆಯವರು ನನ್ನನ್ನ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ನೇಮಿಸಿದ್ದರು. ಆ ಸಮಿತಿಯಲ್ಲಿ ಸಿದ್ದಯ್ಯ ಪುರಾಣಿಕ್, ಖಾದ್ರಿ ಶಾಮಣ್ಣ, ದೇವನೂರು ಮಹಾದೇವರಂತಹ ಘಟಾನುಘಟಿ ಸಾಹಿತಿಗಳಿದ್ದರು. ಅವರಲ್ಲಿ ಕೆ.ಎಸ್. ನಿಸಾರ್ ಅಹಮ್ಮದ್ ಕೂಡ ಒಬ್ಬರು. ಅವರ ಒಡನಾಟದಿಂದ ಕನ್ನಡದ ಮೇಲಿನ ನನ್ನ ಅಭಿಮಾನ ಮತ್ತು ಪ್ರೀತಿ ಮತ್ತಷ್ಟು ಹೆಚ್ಚಿದೆ ಎಂದು ಸಿಎಂ ಹೇಳಿದರು.

ಇದೇವೇಳೆ, 5 ವರ್ಷ ಮುಖ್ಯಮಂತ್ರಿಯಾಗಿ ದಸರಾ ಕಣ್ತುಂಬಿಸಿಕೊಂಡಿದ್ದೇನೆ. ಮುಂದಿನ 5 ವರ್ಷವೂ ದಸರಾ ಉದ್ಘಾಟನೆ ಮಾಡುತ್ತನೆ. ಜಿ.ಟಿ. ದೇವೇಗೌಡರು ನನಗೆ ವಿಶ್ ಮಾಡಿದ್ದಾರೆ. ನೀನೂ ವಿಶ್ ಮಾಡು ಪ್ರತಾಪ್ ಸಿಂಹ ಎಂದು ಸಿಎಂ ಸಿದ್ದರಾಮಯ್ಯ ಕಾಲೆಳೆದ ಘಟನೆ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ