ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಬಗ್ಗೆ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿರುವ ಪುತ್ರ ಯತೀಂದ್ರ ಪರ ಸಿಎಂ ಸಿದ್ದರಾಮಯ್ಯ ಬ್ಯಾಟ್ ಮಾಡಿದ್ದು ಅವನು ಹಂಗೆಲ್ಲಾ ಹೇಳಿಲ್ಲ, ಎಲ್ಲಾ ನೀವೇ ಮಾಡಿದ್ದು ಎಂದು ಪತ್ರಕರ್ತರ ಮೇಲೆ ಗೂಬೆ ಕೂರಿಸಿದ್ದಾರೆ.
ಮೊನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಯತೀಂದ್ರ, ನಮ್ಮ ತಂದೆ ರಾಜಕೀಯದ ಸಂಧ್ಯಾಕಾಲದಲ್ಲಿದ್ದಾರೆ. ಅವರ ನಂತರ ಕಾಂಗ್ರೆಸ್ ನಾಯಕತ್ವ ವಹಿಸಲು ಸತೀಶ್ ಜಾರಕಿಹೊಳಿ ಸೂಕ್ತ ಎಂದು ಹೇಳಿಕೆ ನೀಡಿದ್ದು ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ವಿಚಾರವಾಗಿ ಕಿತ್ತಾಟ ಶುರುವಾಗಲು ಕಾರಣವಾಗಿದೆ.
ಈ ಬಗ್ಗೆ ಕೆಪಿಸಿಸಿ ಈಗಾಗಲೇ ಯತೀಂದ್ರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದೆ. ಇದರ ನಡುವೆ ಪುತ್ರನ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದೆ. ಅವನು ಆ ಅರ್ಥದಲ್ಲಿ ಹೇಳಿಲ್ಲ. ಅವನ ಜೊತೆ ನಾನು ಮಾತನಾಡಿದ್ದೇನೆ. ಸಿಎಂ ಬದಲಾವಣೆ ಬಗ್ಗೆ ನಾನು ಹೇಳಿಲ್ಲ ಎಂದಿದ್ದಾನೆ. ಇಂಥಹವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಅವನು ಹೇಳಿಲ್ಲ. ಅವನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಯತೀಂದ್ರನ ಜೊತೆ ನಾನು ಮಾತನಾಡಿದ್ದೇನೆ, ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಎಂದಿದ್ದಾನೆ. ನಿಮ್ಮಂತಹವರು ಯಾರೋ ಪ್ರಶ್ನೆ ಕೇಳಿದ್ದಕ್ಕೆ ಅವನು ಕೊಟ್ಟ ಉತ್ತರವನ್ನು ತಿರುಚಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.