ಕೋರ್ಟಿನ ತಡೆಯಾಜ್ಞೆ ನಡುವೆ ದಲಿತರ ಭೂಮಿ ತೆರವಿಗೆ ಯತ್ನ: ಛಲವಾದಿ ನಾರಾಯಣಸ್ವಾಮಿ

Krishnaveni K

ಶುಕ್ರವಾರ, 27 ಜೂನ್ 2025 (15:55 IST)
ಬೆಂಗಳೂರು: ದಲಿತರನ್ನು ಒಕ್ಕಲೆಬ್ಬಿಸಿ ಮೌಲ್ಯಯುತ ಜಮೀನು ಕಿತ್ತುಕೊಂಡು ಬಂಡವಾಳ ಮಾಡಿಕೊಳ್ಳಲು ಹುನ್ನಾರ ನಡೆದಿದೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
 
ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 155 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಹಿಂದೆ ಇದು ಅರಣ್ಯ ಭೂಮಿ ಇದ್ದಿರಬಹುದು. ಒಮ್ಮೆ ಅದನ್ನು ಕಂದಾಯ ಭೂಮಿ ಎಂದು ಕೊಟ್ಟ ಮೇಲೆ ಕಂದಾಯ ಇಲಾಖೆ ಅದನ್ನು ವಿತರಿಸಿದೆ. ರೈಲ್ವೆ, ಕೆಐಎಡಿಬಿಗೂ ಜಾಗ ಕೊಟ್ಟಿದ್ದಾರೆ. ಕಂದಾಯ ಇಲಾಖೆ ಸಚಿವರು, ಕೈಗಾರಿಕಾ ಸಚಿವರು, ಅರಣ್ಯ ಸಚಿವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಪಟ್ಟಾದಾರರ ಸಭೆ ಕರೆದು ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು. ಸರಕಾರವು ಮಾಫಿಯ ಪರ ಇದೆಯೇ ಅಥವಾ ದಲಿತರ ಪರ ಇದೆಯೇ ಎಂಬ ಬಗ್ಗೆ ನಿಲುವನ್ನು ಪ್ರಕಟಿಸಬೇಕು. ದಲಿತರ ಜಮೀನು ಹೇಗೆ ಕಬಳಿಸಲು ಸಾಧ್ಯ ಎಂದು ಕೇಳಿದರು.
 
ಸದುದ್ದೇಶ ಇದ್ದಲ್ಲಿ ಜಮೀನನ್ನು ಹಣಕೊಟ್ಟು ಸ್ವಾಧೀನಕ್ಕೆ ಪಡೆಯಬೇಕಿದೆ. ಈ ದೇಶಕ್ಕೆ ಕಾನೂನಿದೆ. ಬಾಬಾಸಾಹೇಬರ ಶ್ರೇಷ್ಠ ಸಂವಿಧಾನವು ಎಲ್ಲರಿಗೂ ಹಕ್ಕು ಕೊಟ್ಟಿದೆ; ಭೂಮಿಯ ವಾರೀಸುದಾರರ ಹಕ್ಕು ಕಸಿಯುವುದು ಸರಿಯಲ್ಲ ಎಂದು ತಿಳಿಸಿದರು. ಇದು ದಲಿತರಿಗೆ ಸರಕಾರ ಮಾಡುತ್ತಿರುವ ದ್ರೋಹ ಎಂದು ಟೀಕಿಸಿದರು. ಇದರ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಹುತೇಕ ದಲಿತರೇ ವಾಸವಿರುವ ಜಾಗದ ಮೇಲೆ ಸರಕಾರಿ ಮಾಫಿಯ ಕಣ್ಣು ಬಿದ್ದಿದೆ. ಒಂದು ಎಕರೆಗೆ 40ರಿಂದ ಸುಮಾರು 70 ಕೋಟಿ ಮೌಲ್ಯದ ಭೂಮಿ ಇದಾಗಿದೆ. ಸುಮಾರು 6ರಿಂದ 7 ಸಾವಿರ ಕೋಟಿ ಮೌಲ್ಯದ ಭೂಮಿಯನ್ನು ಪಡೆಯಲು ಮಾಫಿಯಗಳು ಮುಂದಾಗಿವೆ. ಈ ಮಾಫಿಯಕ್ಕೆ ಸರಕಾರದ ಬೆಂಬಲವಿದೆ. ಪೊಲೀಸ್ ಇಲಾಖೆಯನ್ನು ಬಳಸಿ ಜನರ ಮೇಲೆ ದರ್ಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
 
ಟೆಕ್ ಪಾರ್ಕ್ ಮುಂಭಾಗದ ಭೂಮಿ ಇದಾಗಿದ್ದು, ಇವುಗಳಲ್ಲಿನ ಕಟ್ಟಡ ತೆರವುಗೊಳಿಸದಂತೆ ಕೋರ್ಟ್ ಸೂಚನೆಯೂ ಇದೆ ಎಂದು ವಿವರಿಸಿದರು. ದಲಿತರು ಕೋಟ್ಯಧಿಪತಿ ಆಗುವುದನ್ನು ಈ ಸರಕಾರಕ್ಕೆ ಸಹಿಸಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ದಲಿತರ ಹೋರಾಟ ನಡೆದಿದೆ. ಯಾರಾದರೂ ಪ್ರಶ್ನಿಸಿದರೆ ಅವರನ್ನು ಪೊಲೀಸ್ ಠಾಣೆಗೆ ಒಯ್ಯಲಾಗುತ್ತಿದೆ ಎಂದು ವಿವರಿಸಿದರು. ದಲಿತರ ಬಗ್ಗೆ ಈ ಸರಕಾರಕ್ಕೆ ಇಷ್ಟೊಂದು ನಿಷ್ಕಾಳಜಿ ಯಾಕೆ ಎಂದು ಪ್ರಶ್ನಿಸಿದರು.
 
ಸುಮಾರು 2 ಸಾವಿರ ಮನೆಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಬಡ ರೈತರೇ ಇಲ್ಲಿದ್ದು ಎಲ್ಲರೂ ದಲಿತರು. ದಲಿತರ ಮೇಲೆ ದೌರ್ಜನ್ಯ ನಡೆದರೆ ಯಾರೂ ಕೇಳುವವರೇ ಇಲ್ಲ ಎಂಬಂತಿದೆ. ಸುಲಭವಾಗಿ ವಾಪಸ್ ಪಡೆಯಬಹುದೆಂದು ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕೋರ್ಟಿನಲ್ಲಿ ದಾವೆ, ತಡೆಯಾಜ್ಞೆ ಇದ್ದರೂ ಕೂಡ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು. ಮುನಿಸ್ವಾಮಿಯವರು ತಡೆಯಲು ಹೋದರೆ ಅವರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
 
ಹಿನ್ನೆಲೆ ಏನು?: ಬೆಂಗಳೂರು ನಗರ ಜಿಲ್ಲೆಯ ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಕಾಡುಗೋಡಿ 200 ಗ್ರಾಮದ ಸುಮಾರು 711 ಎಕರೆ ಜಮೀನನ್ನು 1950ರ ಆಸುಪಾಸಿನಲ್ಲಿ ಸರಕಾರ ಅಲ್ಲಿನ ರೈತರಿಗೆ ಮಂಜೂರು ಮಾಡಿತ್ತು. ಅಂದಿನಿಂದ ರೈತರು ಅಲ್ಲಿ ವ್ಯವಸಾಯ ಮಾಡುತ್ತ ಬಂದಿದ್ದರು. ಕೆಲವು ಜಮೀನುಗಳ ಪರಭಾರೆ ಆಗಿತ್ತು. ಈಗ ಆಕಾರ್ ಬಂದ್‍ನಲ್ಲಿ 677.3 ಎಕರೆ, ಪಹಣಿ ಕಾಲಂ 9ರಂತೆ 719 ಎಕರೆ ಜಾಗ ಇದೆ. ಹಿಂದೆ ಮಹಾರಾಜರ ಕಾಲದಲ್ಲಿ ಇದು ಅರಣ್ಯ ಭೂಮಿ ಆಗಿತ್ತು ಎಂಬ ಮಾಹಿತಿ ಇದೆ. ಕಂದಾಯ ಇಲಾಖೆಯು ಕಾಡುಗೋಡಿ ಸಾಮೂಹಿಕ ಸಹಕಾರ ಸಂಘದ ಮೂಲಕ ಜಮೀನುಗಳನ್ನು ರೈತರಿಗೆ 2 ಎಕರೆ, 3 ಎಕರೆ, 4 ಎಕರೆಯಂತೆ ಹಂಚಿತ್ತು. ಜಾಗದ ಬೆಲೆ ಗಗನಕ್ಕೆ ಏರಿದ್ದು, ಸರಕಾರ ಈ ಜಾಗವನ್ನು ಅರಣ್ಯ ಇಲಾಖೆ ಜಾಗ ಎನ್ನತೊಡಗಿದೆ. ಅದು ಒತ್ತುವರಿ ಎಂದು ತಿಳಿಸುತ್ತಿದೆ ಎಂದು ಆಕ್ಷೇಪಿಸಿದರು.
 
ಅರಣ್ಯ ಇಲಾಖೆಗೆ ಸೇರಿದ್ದರೆ ಬೇರೆ ಉದ್ದೇಶಕ್ಕೆ ಕೊಟ್ಟದ್ದು ಹೇಗೆ?
ಈ ಜಾಗಕ್ಕೆ ಪಟ್ಟಾ ನೀಡಲಾಗಿದೆ ಎಂದು 1950ರಿಂದ ಕೊಟ್ಟ ಪಹಣಿಯನ್ನು ಪ್ರದರ್ಶಿಸಿದರು. ತೆರಿಗೆ ಕಟ್ಟಿಸಿಕೊಂಡಿದ್ದು, ಎಲ್ಲ ದಾಖಲೆ ಇದ್ದರೂ ಇದ್ದಕ್ಕಿದ್ದಂತೆ ಸರಕಾರ ಈ ಕ್ರಮ ಕೈಗೊಳ್ಳುತ್ತಿದೆ. ಅಲ್ಲಿ ಸದ್ಯಕ್ಕೆ 60 ಎಕರೆ 30 ಗುಂಟೆ ಅರಣ್ಯ ಇಲಾಖೆ ಜಮೀನಿದೆ. ಸರಕಾರದ ಕೆಐಎಡಿಬಿಗೆ 153.28 ಎಕರೆ, ರೈಲ್ವೆ ಇಲಾಖೆಗೆ 228.31 ಎಕರೆ, ದೇವಸ್ಥಾನಕ್ಕೆ ಸುಮಾರು 3 ಎಕರೆ ಕೊಟ್ಟಿದ್ದು, ಅದರಲ್ಲೇ ಇಂದಿರಾ ಕ್ಯಾಂಟೀನ್ ಮಾಡಿದ್ದಾರೆ. 20 ಎಕರೆಯಲ್ಲಿ ಮನೆಗಳಿವೆ. ರಸ್ತೆಗೆ 13 ಎಕರೆ 3 ಗುಂಟೆ, ಸ್ಮಶಾನಕ್ಕೆ ಎರಡೂವರೆ ಎಕರೆ, ಬಡಾವಣೆ ಮಾಡಲು 32 ಎಕರೆ ಕೊಟ್ಟಿದ್ದು, ಅದರಲ್ಲೇ ಪೊಲೀಸ್ ಠಾಣೆ ಮಾಡಿದ್ದಾರೆ. 125 ಎಕರೆಯಲ್ಲಿ ಕೃಷಿ ಕಾರ್ಯ ನಡೆದಿದೆ. ಮೆಟ್ರೊಗೆ 44.36 ಎಕರೆ ಅಂದರೆ 45 ಎಕರೆ ನೀಡಿದ್ದಾರೆ. ಅದು ಅರಣ್ಯ ಇಲಾಖೆಯದಾದರೆ ಇವೆಲ್ಲ ಕೊಟ್ಟದ್ದು ಹೇಗೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆ ಮಾಡಿದರು.
 
ಕೋರ್ಟ್ ಆದೇಶವಿದ್ದರೂ ಕಟ್ಟಡ ತೆರವು
ಅನೇಕರು ಕೋರ್ಟಿಗೆ ಹೋಗಿದ್ದಾರೆ. ಅರಣ್ಯಾಧಿಕಾರಿ ಉಪಸ್ಥಿತಿಯಲ್ಲಿ ನಿನ್ನೆ ಕೊಟ್ಟಿರುವ ಆದೇಶದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಅದರಲ್ಲಿ ಮನೆಗಳಿವೆ; ಹಲವು ಆದೇಶವಿದ್ದರೂ ಮನೆ, ಕಟ್ಟಡಗಳ ತೆರವು ಮಾಡಲಾಗುತ್ತಿದೆ ಎಂದರಲ್ಲದೆ, ಹಲವರಿಗೆ ಲಭಿಸಿದ ತಡೆಯಾಜ್ಞೆಯನ್ನು ಗಮನಕ್ಕೆ ತಂದರು. ಸಾವಿರಾರು ಜನ ಹೆಣ್ಮಕ್ಕಳಿದ್ದರೂ ಏಳೆಂಟು ಮಹಿಳಾ ಪೊಲೀಸರಿದ್ದಾರೆ. ಉಳಿದವರೆಲ್ಲ ಪುರುಷ ಪೊಲೀಸರು. ಒಬ್ಬೊಬ್ಬರನ್ನು ಎತ್ತಿ ಹೊರದಬ್ಬುತ್ತಿದ್ದಾರೆ. ಎಂತ ಗೂಂಡಾವರ್ತನೆ ಇದು ಎಂದು ಕೇಳಿದರು. ಈ ಕುರಿತ ವಿಡಿಯೋವನ್ನೂ ತೋರಿಸಿದರು. ಪ್ರಕರಣ ಕೋರ್ಟಿನಲ್ಲಿದೆ ಎಂದು ಗಮನಕ್ಕೆ ತಂದರೆ, ಸರಕಾರ ತಮಗೆ ಟಾಸ್ಕ್ (ಕಾರ್ಯನಿಗದಿ) ನೀಡಿದೆ; ನಮ್ಮ ಕೆಲಸ ನಾವು ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ ಎಂದು ಆಕ್ಷೇಪ ಸೂಚಿಸಿದರು.
 
ಶ್ವೇತಪತ್ರ ಬಿಡುಗಡೆಗೆ ಆಗ್ರಹ
ತನಿಖೆ ನಡೆಯಲಿ. ಸರಕಾರ 1950ರಿಂದ ಈ ವರೆಗಿನ ಶ್ವೇತಪತ್ರ ಬಿಡುಗಡೆ ಮಾಡಲಿ. ಯಾವ್ಯಾವ ಅವಧಿಯಲ್ಲಿ ಏನೇನು ಆಗಿದೆ ಎಂದು ವಿವರ ಕೊಡಲಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದರು.
 
ಯಾವ ಕಾರಣಕ್ಕೆ ಕೆಐಎಡಿಬಿಗೆ ಜಾಗ ಕೊಡಲಾಗಿದೆ? ಮೆಟ್ರೊ, ರೈಲ್ವೆ, ಇತರರಿಗೆ ಕೊಟ್ಟದ್ದು ಹೇಗೆ? ಆದೇಶ ಸರಕಾರದ್ದೇ ತಾನೇ? ಅಂದ ಮೇಲೆ ಸರಕಾರದ್ದೇ ತಪ್ಪಿದೆ. ಸರಕಾರ ತಪ್ಪಿಟ್ಟುಕೊಂಡು ಕಬ್ಜಾಗೆ ಮುಂದಾಗಿದೆ. ಕೆಐಎಡಿಬಿಗೆ ಕೊಟ್ಟ ಜಾಗವನ್ನೂ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
 
ಪ್ರತಿಭಟನಾಕಾರರಿಂದ ಹೆಚ್ಚು ಪೊಲೀಸರು ಅಲ್ಲಿದ್ದಾರೆ. ಒಕ್ಕಲೆಬ್ಬಿಸುತ್ತಿದ್ದಾರೆ. ಕೆಐಎಡಿಬಿ, ಮೆಟ್ರೊ, ಪೊಲೀಸ್ ಸ್ಟೇಶನ್, ಸ್ಮಶಾನ, ಖಾಸಗಿ ಫ್ಯಾಕ್ಟರಿಯೂ ಇದೆ. ಇದನ್ನು ಫ್ಯಾಕ್ಟರಿಯವರು ಕೊಂಡುಕೊಂಡಿದ್ದಾರೆ. ಎರಡು ಫ್ಯಾಕ್ಟರಿಯವರು ಸುಪ್ರೀಂ ಕೋರ್ಟಿನವರೆಗೆ ಹೋಗಿದ್ದು, ಇದನ್ನು ಮುಟ್ಟುವಂತಿಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಕೋರ್ಟ್ ಆದೇಶ ಬಂದರೆ ಅರಣ್ಯ ಭೂಮಿ ಖಾಸಗಿ ಭೂಮಿ ಆಗುತ್ತದೆಯೇ ಎಂದು ಕೇಳಿದರು. ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ