ಬಳ್ಳಾರಿ: ಬಳ್ಳಾರಿ ಚುನಾವಣೆ ಬರೋಬ್ಬರಿ 21 ಕೋಟಿ ರೂ. ಬಳಕೆ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಸಂಸದ ಇ ತುಕರಾಂ ಅವರನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಇಂದು ಬೆಳಿಗ್ಗೆಯೇ ಇಡಿ ಅಧಿಕಾರಿಗಳು ಸಂಸದರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಚುನಾವಣೆ ವೇಳೆ ಭಾರೀ ಹಣ ಖರ್ಚು ಮಾಡಿರುವ ಆರೋಪದ ಮೇಲೆ ಇ ತುಕರಾಂ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ತಲಾ 200 ರೂ.ನಂತೆ ಹಣ ಹಂಚಿಕೆ ಮಾಡಿದ ಆರೋಪವೂ ಅವರ ಮೇಲಿದೆ.
ತುಕರಾಂ ಜೊತೆ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ಗಣೇಶ್, ಶ್ರೀನಿವಾಸ್, ಮಾಜಿ ಸಚಿವ ನಾಗೇಂದ್ರ ಮತ್ತು ಅವರ ಸಹಾಯಕ ಗೋವರ್ಧನ್ ಮನೆ ಮೇಲೂ ಇಡಿ ದಾಳಿ ನಡೆಸಿದೆ. ಲೋಕಸಭೆ ಚುನಾವಣೆ ಖರ್ಚಿಗೆ ವಾಲ್ಮೀಕಿ ನಿಗಮದ ಹಣ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಈಗಷ್ಟೇ ನಾಗೇಂದ್ರರನ್ನು ಮರಳಿ ಸಂಪುಟಕ್ಕೆ ಸೇರಿಸಲು ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದಾರೆ. ಇದರ ನಡುವೆ ಈಗ ಇಡಿ ದಾಳಿ ನಡೆದಿದ್ದು, ಶಾಸಕರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಇಡಿ ದಾಳಿಯಿಂದಾಗಿ ವಾಲ್ಮೀಕಿ ಹಗರಣ ಮತ್ತೆ ಸದ್ದು ಮಾಡುತ್ತಿದೆ.