ಬಿಜೆಪಿಯಿಂದ ಬಿಗ್ ಆಪರೇಷನ್: ಲಕ್ಷ್ಮಣ್ ಸವದಿಯೂ ವಾಪಸ್

Krishnaveni K

ಮಂಗಳವಾರ, 30 ಜನವರಿ 2024 (14:02 IST)
Photo Courtesy: Twitter
ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಬಿಜೆಪಿ ಪಕ್ಷ ಬಿಟ್ಟು ಹೋದ ನಾಯಕರನ್ನೆಲ್ಲಾ ಮರಳ ಕರೆತರುವ ಪ್ರಯತ್ನ ನಡೆಸಿದೆ.

ಅದರ ಫಲವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ ಮರಳಿ ಬಿಜೆಪಿಗೆ ವಾಪಸಾಗಿದ್ದಾರೆ. ಇದಕ್ಕಾಗಿ ಅವರು ಕಾಂಗ್ರೆಸ್ ನೀಡಿದ್ದ ಎಂಎಲ್ ಸಿ ಸ್ಥಾನಕ್ಕೂ ರಾಜೀನಾಮೆ ಬಿಟ್ಟಿದ್ದಾರೆ. ಮೂಲಗಳ ಪ್ರಕಾರ ಜಗದೀಶ್ ಶೆಟ್ಟರ್ ಗೆ ಲೋಕಸಭೆ ಚುನಾವಣೆ ಟಿಕೆಟ್ ಆಫರ್ ನೀಡಲಾಗಿದೆ ಎನ್ನಲಾಗಿದೆ.

ಇದರ ನಡುವೆ ವಿಧಾನಸಭೆ ಚುನಾವಣೆ ವೇಳೆ ತಮ್ಮದೇ ಪಕ್ಷ ಕಟ್ಟಿಕೊಂಡು ಪ್ರತ್ಯೇಕವಾಗಿದ್ದ ಗಾಲಿ ಜನಾರ್ಧನ ರೆಡ್ಡಿಯನ್ನೂ ವಾಪಸ್ ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆದಿದ್ದು, ಬಹುತೇಕ ಯಶಸ್ಸು ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬಾಕಿಯಿದೆ. ರೆಡ್ಡಿ ವಾಪಸಾತಿಯಿಂದ ಬಳ್ಳಾರಿಯಲ್ಲಿ ಬಿಜೆಪಿ ಪ್ರಬಲವಾಗಲಿದೆ.

 ಇದರ ನಡುವೆ ಲಕ್ಷ್ಮಣ್ ಸವದಿಯೂ ಬಿಜೆಪಿಗೆ ವಾಪಸಾಗಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಸವದಿಯೂ ಕಳೆದ ವಿಧಾನಸಭೆ ಚುನಾವಣೆ ವೇಳೆ ಮುನಿಸಿಕೊಂಡು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೀಗ ಲಕ್ಷ್ಮಣ್ ಸವದಿಗೂ ಬಿಜೆಪಿ ಲೋಕಸಭೆ ಟಿಕೆಟ್ ಆಫರ್ ನೀಡಿ ಮರಳಿ ಪಕ್ಷಕ್ಕೆ ಕರೆತರುವ ಬಿಗ್ ಆಫರ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಎಲ್ಲಾ ಬೆಳವಣಿಗೆ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ. ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರುವ ಮೂಲಕ ಪಕ್ಷ ಬಲವರ್ಧನೆ ಜೊತೆಗೆ ಕಾಂಗ್ರೆಸ್ ಗೆ ಪ್ರಬಲ ಏಟು ನೀಡುವ ಯೋಜನೆ ಬಿಜೆಪಿಯದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ