ಕರುಳ ಬಳ್ಳಿಯೆಂದೂ ನೋಡದೆ ಅಮಾನುಷ ಕೃತ್ಯವೆಸಗಿದ ತಾಯಿ

Krishnaveni K

ಸೋಮವಾರ, 4 ಮಾರ್ಚ್ 2024 (10:32 IST)
ಬೆಂಗಳೂರು: ಪ್ರಪಂಚದಲ್ಲಿ ಕೆಟ್ಟ ಮಗುವಿರಬಹುದು ಆದರೆ ಕೆಟ್ಟ ತಾಯಿಯಿರಲ್ಲ ಎಂಬ ಮಾತನ್ನು ಈ ಪಾಪಿ ತಾಯಿ ಸುಳ್ಳು ಮಾಡಿದ್ದಾಳೆ. ತನ್ನ ಕರುಳಬಳ್ಳಿಯ ಮೇಲೆಯೇ ಅಮಾನುಷ ಕೃತ್ಯವೆಸಗಿದ್ದಾಳೆ.

ಇಂತಹದ್ದೊಂದು ಅಮಾನವೀಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ. ಸುಮಾರು 3 ವರ್ಷದ ಮುಗ್ಧ ಮಗುವನ್ನು ಹೊಡೆದು-ಬಡಿದು ಮಾಡಿ ಮನೆಯಲ್ಲಿಯೇ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬಯಲಾಗಿದೆ. ಸ್ಥಳೀಯರ ಸಹಾಯದಿಂದ ಮಗುವನ್ನು ರಕ್ಷಿಸಲಾಗಿದೆ. ಈ ವೇಳೆ ಮಗು ತನಗಾದ ಭಯಾನಕ ಅನುಭವವನ್ನು ಹೇಳಿಕೊಂಡಿದೆ.

ತಾಯಿ ಜೊತೆ ಆಕೆಯ ಪ್ರಿಯಕರನೂ ಸೇರಿಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ವಿಚ್ಛೇದಿತ ತಾಯಿಗೆ ಮಗು ಬೇಡವಾಗಿತ್ತು. ನೀನು ನನ್ನ ಜೊತೆಗೆ ಇರುವುದು ಬೇಡ ಎಂದು ಚಿತ್ರ ಹಿಂಸೆ ನೀಡುತ್ತಿದ್ದಳು. ಮಗುನ್ನು ದಿನವಿಡೀ ಮನೆಯಲ್ಲಿ ಕೂಡಿ ಹಾಕಿ ಒಬ್ಬಂಟಿಯಾಗಿ ಬಿಟ್ಟು ಹೊರಗೆ ಹೋಗುತ್ತಿದ್ದಳು.

ಕೊನೆಗೂ ಇದು ಸ್ಥಳೀಯರ ಗಮನಕ್ಕೆ ಬಂದಿದ್ದು, ಸಂಘಟನೆಯೊಂದರ ಗಮನಕ್ಕೆ ತಂದಿದ್ದಾರೆ. ಬಳಿಕ ಅವರು ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಮೈ ತುಂಬಾ ಗಾಯಗಳಾಗಿವೆ. ಅಮ್ಮನ ಜೊತೆ ಅಂಕಲ್ ಕೂಡಾ ಕುಕ್ಕರ್ ನಿಂದ ತಲೆಗೆ ಹೊಡೆದರು, ಕಾಲಿನಲ್ಲಿ ಒದ್ದಿದ್ದಾರೆ ಎಂದೆಲ್ಲಾ ಮಗು ಹೇಳಿಕೊಂಡಿದೆ. ಮಗುವಿನ ಅವಸ್ಥೆ ನೋಡಿ ಸ್ಥಳೀಯರು ಮರುಗಿದ್ದಾರೆ. ತಾಯಿಯನ್ನು ವಿಚಾರಣೆ ನಡೆಸಿದಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಕೆಲಸಕ್ಕೆ ಹೋಗುವಾಗ ಅನಿವಾರ್ಯವಾಗಿ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿದ್ದಾಳೆ.  ಜೀವನದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲಲಿ ಎಂದು ಮಗುವಿಗೆ ಹೀಗೆ ಮಾಡಿದ್ದಾಗಿ ಹೇಳಿದ್ದಾಳೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಮಗುವನ್ನು ಈ ತಾಯಿಗೆ ಒಪ್ಪಿಸಬೇಡಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ